ದೆಹಲಿ: ಉತ್ತರ ಸಿಕ್ಕಿಂನ ನಾಥುಲಾ ಗಡಿಭಾಗದಲ್ಲಿ ಭಾರತದ ಭೂ ಭಾಗ ಅತಿಕ್ರಮಿಸಲು ಯತ್ನಿಸಿದ ಚೀನಾ ಸೈನಿಕರ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಕಳೆದ ವಾರ ಚೀನಾ ಸೈನಿಕರು ಅಕ್ರಮವಾಗಿ ಗಡಿದಾಟುವ ಪ್ರಯತ್ನ ಮಾಡಿದ್ದರು. ಆದರೆ, ಭಾರತೀಯ ಸೇನೆ ಈ ದುಷ್ಕೃತ್ಯವನ್ನು ಸಮರ್ಥವಾಗಿ ಎದುರಿಸಿದೆ. ಚೀನಾ ಸೈನಿಕರನ್ನು ಭಾರತದ ಯೋಧರು ಹಿಮ್ಮೆಟ್ಟಿಸಿದ್ದಾರೆ. ಭಾರತದ ಸೈನಿಕರ ಪ್ರತಿರೋಧದಿಂದ ಚೀನಾ ಸೈನಿಕರು ಹಿಂದೆ ಸರಿದಿದ್ದಾರೆ.
ಈ ಸಂದರ್ಭದಲ್ಲಿ ಎರಡು ಸೇನೆಗಳ ಮಧ್ಯೆ ಘರ್ಷಣೆ ಉಂಟಾಗಿದೆ. 20 ಜನ ಚೀನಾ ಸೈನಿಕರು ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾಲ್ವರು ಭಾರತೀಯ ಯೋಧರು ಸಣ್ಣಪುಟ್ಟ ಗಾಯಗೊಂಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಪ್ರತಿಕೂಲ ಹವಾಮಾನದ ಮಧ್ಯೆಯೂ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆ ಸಫಲವಾಗಿದೆ.
ಸದ್ಯ, ಘರ್ಷಣೆ ನಡೆದ ಸಿಕ್ಕಿಂ ಪ್ರದೇಶ ಪ್ರಕ್ಷುಬ್ದವಾಗಿದ್ದರೂ ಸ್ಥಿರವಾಗಿದೆ ಎಂದು ಮಾಹಿತಿ ಲಭಿಸಿದೆ. ಸಿಕ್ಕಿಂನ ಕಠಿಣ ಹವಾಮಾನ ಪರಿಸ್ಥಿತಿಯ ನಡುವೆ ಭಾರತೀಯ ಯೋಧರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷದ ಜೂನ್ 15ರಂದು, ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯ ಭಾಗದಲ್ಲಿ ಚೀನಾ-ಭಾರತ ಸೈನಿಕರ ನಡುವೆ ನಡೆದ ಮುಖಾಮುಖಿಯ ಬಳಿಕ ಇದೀಗ ಈ ಘಟನೆ ಸಂಭವಿಸಿದೆ.