ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಸರಣಿ ಸರಗಳ್ಳತನ ಮಾಡುತ್ತ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಅಂತರ್ ಜಿಲ್ಲಾ ಸರಗಳ್ಳನನ್ನು ಉಡುಪಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಮುಳಿಹಿತ್ಲು ನಿವಾಸಿ ಚಂದ್ರಶೇಖರ ಎಂದು ಗುರುತಿಸಲಾಗಿದೆ.
ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಜಿಲ್ಲಾ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಉಡುಪಿ ಜಿಲ್ಲೆಯಲ್ಲಿ ಕಳೆದ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ನಡೆದ ಸರಣಿ ಸರಗಳ್ಳತನ ಪ್ರಕರಣಗಳನ್ನು ಪೋಲೀಸರು ಭೇದಿಸಿದ್ದು ಒಟ್ಟು ರೂ 9.38 ಲಕ್ಷ ಮೌಲ್ಯದ ಸಾಮಾಗ್ರಿಗಳನ್ನು ವಶಪಡಿಸಿಕೊಂಡು ಒಬ್ಬ ಅಂತರ್ ಜಿಲ್ಲಾ ಸರಗಳ್ಳನನ್ನು ಬಂಧಿಸಲಾಗಿದೆ ಎಂದರು.
ಬಂಧಿತ ಆರೋಪಿಯನ್ನು ವಿಚಾರಣೆಗೊಳಪಡಿಸಿ ಜುಪಿಟರ್ ಸ್ಕೂಟರ್ ನ ಬಗ್ಗೆ ದಾಖಲಾತಿಯನ್ನು ಕೇಳಿದಾಗ ತಾನು ಸರಗಳ್ಳತನ ಮಾಡುವ ಉದ್ದೇಶದಿಂದ ಮಂಗಳೂರಿನ ಕಂಕನಾಡಿಯ ಗೋರಿಗುಡ್ಡೆ ಎಂಬಲ್ಲಿ ಸೆಕೆಂಡ್ ಹ್ಯಾಂಡ್ ಬಜಾರ್ ನಿಂದ ಖರೀದಿಸಲು ಟೆಸ್ಟ್ ರೈಡ್ ಮಾಡಿ ನೋಡುವುದಾಗಿ ಸುಳ್ಳು ಹೇಳಿ ಮೋಸ ಮಾಡಿ ತೆಗೆದುಕೊಂಡು ಬಂದಿರುವುದಾಗಿಯೂ ಈ ಸ್ಕೂಟರ್ ನಲ್ಲಿಯೇ ಮಂಗಳೂರು, ಉಡುಪಿಯ ಸೈಂಟ್ಸಿಸಿಲಿ ಶಾಲೆ ಬಳಿ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಇಂದ್ರಾಳಿ, ಇನ್ನು ಉಳಿದ ಕಡೆಗಳಲ್ಲಿ ಒಂಟಿ ಮಹಿಳೆಯರು ನಡೆದುಕೊಂಡು ಹೋಗುವಾಗ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳನ್ನು ಅಪಹರಣ ಮಾಡುತ್ತಿದ್ದುದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.ಆರೋಪಿಯು ದಕ್ಷಿಣ ಕನ್ನಡ , ಉಡುಪಿ ಜಿಲ್ಲೆ ಸೇರಿದಂತೆ ಹಲವಡೆ ನಡೆಸಿದ ಕಳ್ಳತನ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾನೆ.