ಬೆಂಗಳೂರು: ನಟ ದರ್ಶನ್ ಮತ್ತು ಜಗ್ಗೇಶ್ ನಡುವಿನ ಜಗಳ ಮುಗಿಲು ಮುಟ್ಟಿರುವಾಗಲೇ ಜಗ್ಗೇಶ್ ಗೆ ರಾಜ್ಯ ಬಿಜೆಪಿ ಸಿಹಿ ಸುದ್ದಿ ನೀಡಿದೆ.
ನಟ ದರ್ಶನ್ ಬಗ್ಗೆ ಅವಹೇಳನಕಾರೀ ಮಾತನಾಡಿದರೆಂದು ದರ್ಶನ್ ಅಭಿಮಾನಿಗಳು ಜಗ್ಗೇಶ್ ಚಲನಚಿತ್ರವೊಂದರ ಶೂಟಿಂಗ್ ನಡೆಸುತ್ತಿರುವಲ್ಲಿಗೆ ಮುತ್ತಿಗೆ ಹಾಕಿ ಜಗ್ಗೇಶ್ ರಲ್ಲಿ ಕ್ಷಮೆ ಕೇಳುವಂತೆ ಮಾಡಿದ್ಧರು.
ಬಳಿಕ ಜಗ್ಗೇಶ್ ಟ್ವಿಟರ್ ನಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿ ನಟ ದರ್ಶನ್ ಅಭಿಮಾನಿಗಳ ನಡೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ರಾಜ್ಯದಾದ್ಯಂತ ಈ ವಿಷಯ ಭಾರಿ ಪ್ರಚಾರ ಪಡೆಯುತ್ತಿದ್ದಂತೆ ಇದೀಗ ನಟ ಜಗ್ಗೇಶ್ ಗೆ ಬಿಜೆಪಿ ಸಿಹಿ ಸುದ್ದಿ ನೀಡಿದೆ.
ಬಿಜೆಪಿಯ ರಾಜ್ಯ ವಕ್ತಾರರಾಗಿ ನಟ ಜಗ್ಗೇಶ್ ರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಯ್ಕೆ ಮಾಡಿದ್ದಾರೆ. ಮುಖ್ಯ ವಕ್ತಾರರಾಗಿ ಕ್ಯಾ.ಗಣೇಶ್ ಕಾರ್ಣಿಕ್ ಇದ್ದು, ಜಗ್ಗೇಶ್ ಸೇರಿದಂತೆ ಹಲವರನ್ನು ವಕ್ತಾರನ್ನಾಗಿ ಆಯ್ಕೆ ಮಾಡಲಾಗಿದೆ.
ಜಗ್ಗೇಶ್ ತನ್ನ ರಾಜಕೀಯ ಜೀವನವನ್ನು ಕಾಂಗ್ರೆಸ್ ಪಕ್ಷದಿಂದ ಪ್ರಾರಂಭಿಸಿದರು. ಕಾಂಗ್ರೆಸ್ಸಿನಿಂದ ಶಾಸಕರಾಗಿ ನಂತರ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.