ಪುತ್ತೂರು: ಸುಮಾರು 6 ವರ್ಷಗಳ ಹಿಂದೆ ನಡೆದ ಹಲ್ಲೆ ಪ್ರಕರಣದಲ್ಲಿ ಆರೋಪಿಗಳು ದೋಷಮುಕ್ತ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಘಟನೆ ವಿವರ : ಸುಮಾರು 6 ವರ್ಷಗಳ ಹಿಂದೆ ದಿನಾಂಕ 29/12/2017 ರಂದು ಸಾಯಂಕಾಲ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಚಾಲಕರಾದ ರಾಮಕೃಷ್ಣ ರವರ ಜೊತೆ ನಿರ್ವಾಹಕರಾಗಿ ರಿಯಾಜ್ ಮುಲ್ಲಾರ್ ರವರು ಮಂಗಳೂರು ಸ್ಟೇಟ್ ಬ್ಯಾಂಕ್ ನಿಂದ ಹೊರಟು ಪುತ್ತೂರು ಕಡೆಗೆ ಬರುತ್ತಾ 8.30 ಗಂಟೆಗೆ ರಾತ್ರಿ ಪುತ್ತೂರು ತಾಲೂಕು, ಕಬಕ ಗ್ರಾಮದ, ನೆಹರೂ ನಗರ ಎಂಬಲ್ಲಿಗೆ ತಲುಪಿದಾಗ ಖಾಸಗಿ ಬಸ್ಸನ್ನು ಅದರ ಚಾಲಕ ಆರೋಪಿ ಪಿ.ಎ ಜೋಯ್ ಎಂಬವರು ಒಮ್ಮೆಲೇ ಬ್ರೆಕ್ ಹಾಕಿ ರಾಮಕೃಷ್ಣ ರವರ ಬಸ್ಸಿಗೆ ಅಡ್ದವಾಗಿ ನಿಲ್ಲಿಸಿದ ಸಮಯ ಚಾಲಕರಾದ ರಾಮಕೃಷ್ಣರವರು ಆರೋಪಿ ಬಸ್ಸಿನ ಚಾಲಕರಲ್ಲಿ “ನಮ್ಮ ಬಸ್ಸಿಗೆ ಯಾಕೆ ಈ ರೀತಿ ಅಡ್ಡ ನಿಲ್ಲಿಸಿದ್ದೀರಿ” ಎಂದು ಕೇಳಿದರು.
ಆಗ ಆರೋಪಿ ಬಸ್ಸಿನ ಚಾಲಕ ತನ್ನ ಬಸ್ಸನ್ನು ನಿಲ್ಲಿಸಿ ಬಂದು ಬಸ್ಸಿನ ಚಾಲಕರಾದ ರಾಮಕೃಷ್ಣರವರನ್ನು ಉದ್ದೇಶಿಸಿ ಆವಾಚ್ಯ ಶಬ್ದಗಳಿಂದ ಬೈದು ಆರೋಪಿ ಬಸ್ಸಿನ ಚಾಲಕನ ಜೊತೆ ಬಂದ ಇತರ 3 ಮಂದಿ ಸೇರಿಕೊಂಡು ಚಾಲಕ ರಾಮಕೃಷ್ಣರವರ ಮೇಲೆ ಹಲ್ಲೆ ನಡೆಸಿದ್ದು, ಹಲ್ಲೆಯನ್ನು ತಡೆಯಲು ಬಂದ ರಿಯಾಜ್ ಮುಲ್ಲಾರ್ ಗೆ ಆರೋಪಿಗಳು ಕೊಲೆ ಬೆದರಿಕೆ ಹಾಕಿರುತ್ತಾರೆ.
ಆರೋಪಿಗಳ ವಿರುದ್ಧ ನಗರ ಪೊಲೀಸರು ಭಾರತೀಯ ದಂಡ ಸಂಹಿತೆಯ ಕಲಂ 341,504,506,332,353, ಜೊತೆಗೆ 34 ಕಾಯ್ದೆಯನ್ವಯ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ, ತನಿಖೆ ನಡೆಸಿ ಪಿ.ಎ ಜೋಯ್, ಧನು ಅಲಿಯಾಸ್ ಧನಂಜಯ, ಇಬ್ರಾಹಿಂ ಎಂಬವರ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.
ಸದ್ರಿ ಪ್ರಕರಣದಲ್ಲಿ ಅಭಿಯೋಜನ ಪರ ಸುಮಾರು ಸುಮಾರು 14 ಸಾಕ್ಷಿಗಳ ಪೈಕಿ 13 ಸಾಕ್ಷಿಗಳನ್ನು ತನಿಖೆ ನಡೆಸಿ, ಸುಮಾರು 14 ದಾಖಲೆಗಳನ್ನು ಅಭಿಯೋಜನ ಪರ ಗುರುತಿಸಲ್ಪಟ್ಟಿತ್ತು, ಮತ್ತು ಅಂತಿಮವಾಗಿ 2ನೇ ಮತ್ತು 3ನೇ ಆರೋಪಿಗಳ ಪರ ವಕೀಲರು, ಆರೋಪಿ ಧನಂಜಯ ಮತ್ತು ಇಬ್ರಾಹಿಂ ಹೆಸರುಗಳೇ ಪ್ರಥಮ ವರ್ತಮಾನ ವರದಿಯಲ್ಲಿ ಕಂಡುಬರುವುದಿಲ್ಲ. ಆರೋಪಿಗಳ ಸಂಖ್ಯೆ ಒಮ್ಮೆ 3, ಒಮ್ಮೆ 4, ಮತ್ತು ಒಮ್ಮೆ 5 ಎಂದು ಬೇರೆ ಬೇರೆ ರೀತಿಯಾಗಿ ಹೇಳಿರುತ್ತಾರೆ. ಆರೋಪಿಗಳ ಚಹರೆಯ ಬಗ್ಗೆ ಎಲ್ಲೋ ವಿವರ ಇರುವುದಿಲ್ಲ, ಮತ್ತು ಅವರ ಗುರುತಿಸುವ ಬಗ್ಗೆ ಯಾವುದೇ ಕವಾಯತು ಮಾಡಿರುವುದಿಲ್ಲ. ಯಾವ ಆಧಾರದಲ್ಲಿ ಈ ಕೇಸಿನಲ್ಲಿ ಅವರನ್ನು ಸೇರಿಸಲ್ಪಟ್ಟಿದೆ ಎಂಬುವುದಕ್ಕೂ ಸೂಕ್ತವಾದಂತಹ ಮಾಹಿತಿ ಇಲ್ಲ. ಅದೇ ಪ್ರಕಾರ ಆರೋಪಿಗಳ ಬಂದಿಸಿದ ನಂತರ ಅವರ ಗುರುತಿಸುವಿಕೆಯ ಬಗ್ಗೆ ರಿಯಾಜ್ ಮುಲ್ಲಾರ್ ರವರು ಹೇಳಿದಂತೆ ಕಂಡು ಬರುತ್ತದೆ. ಇದಕ್ಕೆಲ್ಲ ಕಲಶಪ್ರಾಯವಾಗಿ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ರಾಮಕೃಷ್ಣ ರವರು ಘಟನೆ ನಡೆದಿದೆ ಎನ್ನಲಾದ ಸಮಯ ಕರ್ತವ್ಯದಲ್ಲಿ ಇದ್ದರು ಎಂಬುವುದರ ಬಗ್ಗೆ ಸೂಕ್ತ ದಾಖಲಾತಿಗಳು ಇರುವುದಿಲ್ಲ, ಎಂಬುದಾಗಿ ವಾದಿಸಿದ್ದರು.