ಕಲ್ಲಡ್ಕ: ಇಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಸಂಘದ ವತಿಯಿಂದ ವಿಶ್ವ ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ಮನೆಮನೆಯಲ್ಲೂ ಪಕ್ಷಿಗಳಿಗೆ ನೀರಿಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಮನೆಯಂಗಳದಲ್ಲಿರುವ ಹಾಗೂ ಇನ್ನಿತರ ಪಕ್ಷಿಗಳ ಬಗ್ಗೆ ಜನಜಾಗೃತಿ ಉಂಟು ಮಾಡಿ ಅವುಗಳ ಸಂಕುಲಕ್ಕೆ ಉಂಟಾಗುತ್ತಿರುವ ಭೀತಿಯನ್ನು ತಡೆಗಟ್ಟುವ ಪ್ರಯತ್ನವಾಗಿ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ.
“ರಾಮಾಯಣ ಕಾಲದಲ್ಲಿ ಪಕ್ಷಿಗಳು ಧರ್ಮ ಸಂಸ್ಥಾಪನೆಗೆ ಹೋರಾಟ ನಡೆಸಿರುತ್ತದೆ. ಇತಿಹಾಸ ಕಾಲದಿಂದ ಅಂಚೆಚೀಟಿ ಬಿಡುಗಡೆ ಆಗುವ ಮೊದಲು ಪಕ್ಷಿಗಳೇ ಸಂದೇಶ ವಾಹಕಗಳಾಗಿದ್ದವು. ಮಹಾರಾಷ್ಟ್ರದ ಲಾಪೋಡಿಯಾ ಎಂಬ ಗ್ರಾಮದಲ್ಲಿ ಇವತ್ತಿಗೂ ಪಕ್ಷಿಗಳಿಗೆ ಕಲ್ಲು ಹೊಡೆಯುವುದು ಅಪರಾಧವಾಗಿದೆ.
ಮನುಷ್ಯ ಮತ್ತು ಪಕ್ಷಿಗಳಿಗೆ ನೈಸರ್ಗಿಕವಾದ ಅವಿನಾಭಾವ ಸಂಬಂಧವಿದೆ. ಪ್ರಾಕೃತಿಕ ಸಮತೋಲನ ಸಾಧಿಸಲು ಮತ್ತು ಭೂಮಿಯ ಮೇಲೆ ವೃಕ್ಷ ಸಂಪತ್ತನ್ನು ಉಳಿಸಿ ಬೆಳೆಸುವ ಮಹತ್ತರವಾದ ಕೆಲಸವನ್ನು ಪಕ್ಷಿಗಳು ನೀಡುತ್ತಿದೆ. ಬದಲಾದ ಕಾಲಘಟ್ಟದಲ್ಲಿ ಪಕ್ಷಿಗಳ ಜೀವ ಸಂಕುಲ ಹಾಗೂ ವಾಸಸ್ಥಾನ ಅಳಿವಿನಂಚಿನಲ್ಲಿದೆ.
ತಾಂತ್ರಿಕ ಬದುಕಿಗೆ ಜೋತುಬಿದ್ದು, ಕೃಷಿಯಲ್ಲಿ ಕೀಟನಾಶಕ ಉಪಯೋಗಿಸಿ, ಪ್ಯಾಕೆಟ್ ಆಹಾರಗಳ ಬಳಕೆ ಮತ್ತು ಆವಾಸಗಳ ಕೊರತೆಯಿಂದ ಪಕ್ಷಿ ಸಂಕುಲ ನಾಶವಾಗುತ್ತದೆ.
ಅತಿಯಾದ ತಾಪಮಾನ ಏರಿಕೆಯಿಂದ, ನೀರಿನ ಕೊರತೆಯನ್ನು ನೀಗಿಸಲು ಗೆರಟೆಯ ಮೂಲಕ ಮನೆಮನೆಗಳಲ್ಲಿ ಪಕ್ಷಿಗಳಿಗೆ ನೀರು ಇಡುವ ಕೆಲಸ ಮಾಡಿ” ಎಂದು ಅಧ್ಯಾಪಕರಾದ ಸುಮಂತ್ ಆಳ್ವ ಮಕ್ಕಳಿಗೆ ಕರೆ ನೀಡಿದರು.
ಭಾರತ ಸಂಚಾರ ನಿಗಮದ ನಿವೃತ್ತ ಉದ್ಯೋಗಿ ಪಿ.ಕೆ ಪದ್ಮನಾಭ ಇವರು ಮಣ್ಣಿನ ಪಾತ್ರೆಗೆ ಕಲಸದಿಂದ ನೀರು ಹಾಕುವ ಮೂಲಕ ಪಕ್ಷಿಗಳಿಗೆ ನೀರಿಡುವ ಅಭಿಯಾನವನ್ನು ಉದ್ಘಾಟಿಸದರು. ಶ್ರೀರಾಮ ಶಾಲೆಯ ಸಾವಿರ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಲ್ಲಿ ಪೋಷಕರೊಂದಿಗೆ ಪಕ್ಷಿಗಳಿಗೆ ನೀರಿಡುತ್ತೇವೆ ಎಂಬ ಪ್ರತಿಜ್ಞೆಯನ್ನು ಮಾಡಿದರು.
ವಿಜ್ಞಾನ ಸಂಘದ ನಿರ್ದೇಶಕರಾದ ರಾಜೇಶ್ವರಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. 6ನೇ ತರಗತಿಯ ವಿದ್ಯಾರ್ಥಿನಿಯರು ಗುಬ್ಬಚ್ಚಿ ಗೀತೆ ಹಾಡಿದರು. ತಬಲದಲ್ಲಿ ಏಳನೇ ತರಗತಿಯ ದುರ್ಗಾ ಶರಣ್ ಸಹಕರಿಸಿದರು.