ಕಾಸರಗೋಡು: ಮಿನಿ ಕಂಟೈನರ್ ಲಾರಿಗೆ ಟೂರಿಸ್ಟ್ ಬಸ್ ಡಿಕ್ಕಿ ಹೊಡೆದು ಬಸ್ ಪ್ರಯಾಣಿಕ ಮೃತಪಟ್ಟ ಘಟನೆ ನಡೆದಿದೆ. ಕಾಞಂಗಾಡ್ ಮೂಲದ ಪಟನ್ನಕ್ಕಾಡ್ ಮಯ್ಯತ್ ರಸ್ತೆಯ ನಾಣಿಕಡವ್ ವಳಪ್ ನಿವಾಸಿ ಅಹ್ಮದ್ ಸಾಬಿಕ್ (27) ಮೃತಪಟ್ಟ ಯುವಕ. ಕಣ್ಣೂರು-ತಲಶ್ಶೇರಿ ರಾಷ್ಟ್ರೀಯ ಹೆದ್ದಾರಿಯ ತೊಟ್ಟಡದಲ್ಲಿ ಈ ಅಪಘಾತ ನಡೆದಿದೆ.
ನಿಯಂತ್ರಣ ತಪ್ಪಿದ ಬಸ್ ಹಿಂಬದಿ ಕಂಟೈನರ್ ಲಾರಿಯ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪರಿಣಾಮ ಲಾರಿ ಸಮೀಪದ ಅಂಗಡಿಗೆ ನುಗ್ಗಿದೆ. ಡಿಕ್ಕಿ ಹೊಡೆದ ಬಸ್ಸಿನ ಬದಿಯಲ್ಲಿ ಅಹ್ಮದ್ ಸಾಬಿಕ್ ಕುಳಿತಿದ್ದ. ಈ ವೇಳೆ ಬಸ್ ರಸ್ತೆಯಲ್ಲಿ ಮೂರು ಬಾರಿ ಪಲ್ಟಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇತ್ತೀಚಿಗಷ್ಟೇ ಗಲ್ಫ್ನಿಂದ ಬಂದಿದ್ದ ಸಾಬಿಕ್, ಕೊಟ್ಟಾಯಂನಲ್ಲಿರುವ ತನ್ನ ಸ್ನೇಹಿತನ ಸಂಬಂಧಿಕರಿಗೆ ಕಳುಹಿಸಿದ್ದ ವಸ್ತುಗಳನ್ನು ನೇರವಾಗಿ ನೀಡಲು ಹೋಗುತ್ತಿದ್ದನು ಎಂದು ಮೂಲಗಳು ತಿಳಿಸಿದೆ.
ಈ ಅಪಘಾತದಲ್ಲಿ ಓರ್ವ ಮಹಿಳೆಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಎರಡೂ ವಾಹನಗಳ ಚಾಲಕರು ಸೇರಿ 24 ಮಂದಿ ಗಾಯಗೊಂಡಿದ್ದಾರೆ.