ಕನ್ಯಾನ :“ಇತ್ತೀಚಿನ ದಿನಗಳಲ್ಲಿ ಮಾನವೀಯತೆಯ ಮೌಲ್ಯಕ್ಷೀಣವಾಗುತ್ತಿದೆ. ಮಾನವೀಯ ಮೌಲ್ಯ ರೂಪುಗೊಳ್ಳಬೇಕು. ಶಿಕ್ಷಣ ಕ್ಷೇತ್ರದಲ್ಲಿ ಗೊಂದಲವಾಗುತ್ತಿದೆ. ಅದಕ್ಕೆ ತೆರೆ ಎಳೆಯಬೇಕು. ನಿತ್ಯ ವಿದ್ಯಾರ್ಥಿಯಾದವ ಮಾತ್ರ ಆದರ್ಶ ಶಿಕ್ಷಕನಾಗಲು ಸಾಧ್ಯ” ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ತಿಳಿಸಿದರು.
ಕನ್ಯಾನದಲ್ಲಿರುವ ಒಡಿಯೂರು ಶ್ರೀ ಗುರುದೇವ ಐ.ಟಿ.ಐ.ಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, “ವಿದ್ಯಾರ್ಥಿಗಳು ಸ್ವಾವಲಂಬಿಯಾಗಬೇಕು, ವ್ಯಕ್ತಿ ವಿಕಸನವಾಗದೇ ದೇಶ ವಿಕಸನೆಯಾಗದು, ಇತಿಮಿತಿಯ ಬದುಕಿನಿಂದ ಬದುಕು ಸಾರ್ಥಕತೆ ಹೊಂದಲು ಸಾಧ್ಯ“ ಎಂದು ಆರ್ಶೀವಚನ ನೀಡಿ, ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಆಟೋಟ ಸ್ಪರ್ಧೆಗಳ ಬಹುಮಾನ ವಿತರಿಸಿದರು. ಪರಮಪೂಜ್ಯ ಸಾಧ್ವಿ ಮಾತಾನಂದಮಯಿಯವರು ಆರ್ಶೀವಚನ ನೀಡುತ್ತಾ“ವಿದ್ಯೆಯೊಂದಿಗೆ ವಿನಯ ಮುಖ್ಯ, ವಿದ್ಯಾರ್ಥಿ ಜೀವನದಲ್ಲಿ ಪ್ರಾಮಾಣಿಕ ಪ್ರಯತ್ನ, ಆತ್ಮವಿಶ್ವಾಸಬೇಕು, ನಮ್ಮಲ್ಲಿ ನಮಗೆ ನಂಬಿಕೆ ಇರಬೇಕು, ಸೋಲದೆ ಪ್ರಯತ್ನ ಮುಂದುವರಿಸಿದಲ್ಲಿ ಖಂಡಿತ ಯಶಸ್ಸು ಪಡೆಯಲು ಸಾಧ್ಯ“ಎಂದು ತಿಳಿಸಿದರು.
ಐ.ಟಿ.ಐ. ಪ್ರಾಚಾರ್ಯರು, ಸಿಬ್ಬಂದಿ ವರ್ಗದವರು ಹಾಗೂ ತರಬೇತುದಾರರ ಕ್ರಿಯಾಶೀಲ ಮತ್ತು ಶ್ರದ್ಧೆಯ ಸೇವೆಯನ್ನುಅವರು ಶ್ಲಾಘಿಸಿದರು. ಮುಖ್ಯ ಅತಿಥಿಗಳಾಗಿ ಜೀರ್ಣೋದ್ಧಾರ ಸಮಿತಿ, ಸಂತಾನ ಗೋಪಾಲಕೃಷ್ಣ ದೇವಸ್ಥಾನ ಛತ್ರ ಆನೆಕಲ್ಲ್ ಇದರ ಉಪಾಧ್ಯಕ್ಷ ಎನ್. ತಿಮ್ಮಪ್ಪರೈಯವರು ಮಾತನಾಡುತ್ತಾ“ದುಡಿಮೆಯಲ್ಲಿ ಸಂಬಳವೇ ಮುಖ್ಯವಲ್ಲ, ಅನುಭವ ಮುಖ್ಯ, ಕಠಿಣ ಪರಿಶ್ರಮದಿಂದ ಯಶಸ್ಸು ಹೊಂದಲು ಸಾಧ್ಯ ಎಂದು ತಿಳಿಸಿದರು. ಸರಕಾರಿ ಪದವಿ ಪೂರ್ವಕಾಲೇಜು, ಬೆಟ್ಟಂಪಾಡಿ ಇದರ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ರಾವ್ ಕಾನ ಮಾತನಾಡುತ್ತಾ, “ಇಂದು ಶ್ರಮಪಟ್ಟರೆ ನಾಳೆ ಸುಖಪಡಲು ಸಾಧ್ಯ, ವಿದ್ಯಾರ್ಥಿ ಜೀವನದಲ್ಲಿ ಕಾಕದೃಷ್ಟಿ, ಬಕಧ್ಯಾನ ಮತ್ತು ಶ್ವಾನ ನಿದ್ರೆ ಅತೀ ಮುಖ್ಯ”ಎಂದು ವಿವರಿಸಿದರು.
ಇನ್ನೋರ್ವ ಅತಿಥಿ ವಾಣಿವಿಜಯ ಪ್ರೌಢ ಶಾಲೆ ಕೊಡ್ಲಮೊಗರು ಇದರ ಅಧ್ಯಾಪಕಿ ಶ್ರೀಮತಿ ಆಶಾ ದಿಲೀಪ್ ರೈ ಮಾತನಾಡಿ, “ಮನುಷ್ಯನಿಗೆ ಅತೀ ಮುಖ್ಯ ಆರೋಗ್ಯ, ಯಶಸ್ಸನ್ನುಯಾರಿಗೂ ಉಡುಗೊರೆಯಾಗಿ ಕೊಡಲು ಸಾಧ್ಯವಿಲ್ಲ. ಟೀಕೆ ಅವಮಾನಗಳಿಗೆ ಹೆದರಬಾರದು”ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಪೂಜ್ಯ ಶ್ರೀಗಳು ಗೌರವಿಸಿದರು. ಸಂಸ್ಥೆಯ ಪ್ರಾಚಾರ್ಯ ಪ್ರವೀಣ್ ಕುಮಾರ್.ಎನ್ ಸ್ವಾಗತಿಸಿ ವರದಿ ವಾಚಿಸಿದರು. ಸಿಬ್ಬಂದಿ ಸಂಪ್ರೀತ್ ನಿರೂಪಿಸಿ, ಜಯಲತಾ ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.