ಕಾರ್ಕಳ: ರಾಂಗ್ ಸೈಡ್ ನಲ್ಲಿ ಬಂದ ಟವೇರಾ ಕಾರೊಂದು ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟಿರುವ ಘಟನೆ ಕಾರ್ಕಳ ತಾಲೂಕಿನ ಅಜೆಕಾರು ನೂಜಿಗುರಿ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ. ಮೃತ ರಿಕ್ಷಾ ಚಾಲಕ ಅಂಡಾರು ಗ್ರಾಮದ ಬಾಳ್ವೆ ನಿವಾಸಿ ಶೇಖರ ಮೂಲ್ಯ (58) ಎನ್ನಲಾಗಿದೆ.
ರಿಕ್ಷಾ ಚಾಲಕ ಶೇಖರ ಮೂಲ್ಯ ಕಾಡುಹೊಳೆ ಎಂಬಲ್ಲಿಂದ ಪ್ರಯಾಣಿಕರೊಬ್ಬರನ್ನು ಅಜೆಕಾರಿಗೆ ಬಿಟ್ಟು, ಕಾಡು ಹೊಳೆ ರಿಕ್ಷಾ ಸ್ಟ್ಯಾಂಡ್ ಗೆ ವಾಪಾಸಾಗುತ್ತಿದ್ದ ವೇಳೆ ದೊಂಡೇರಂಗಡಿ ಕಡೆಯಿಂದ ಅತೀವೇಗವಾಗಿ ಬಂದ ಟವೇರಾ ವಾಹನ ನೂಜಿಗುರಿಯ ತಿರುವಿನಲ್ಲಿ ರಸ್ತೆಯ ಬಲಬದಿಗೆ ಬಂದು ರಿಕ್ಷಾಗೆ ರಭಸವಾಗಿ ಡಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ಶೇಖರ ಅವರ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದವು. ರಿಕ್ಷಾ ನಜ್ಜುಗುಜ್ಜಾಗಿದ್ದು, ಶೇಖರ ಮೂಲ್ಯ ಅವರ ದೇಹ ರಿಕ್ಷಾದೊಳಗೆ ಸಿಲುಕಿಕೊಂಡಿತ್ತು ಬಳಿಕ ಸ್ಥಳೀಯರು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಅಪಘಾತದ ತೀವ್ರತೆಗೆ ಕಾರು ನಿಯಂತ್ರಣ ಕಳೆದುಕೊಂಡು ಬಲಬದಿಯ ಚರಂಡಿಗೆ ಮಗುಚಿ ಬಿದ್ದಿದೆ ಅಲ್ಲದೇ ಕಾರಿನ ಹಿಂಬದಿಯ ಚಕ್ರ ಕಿತ್ತುಹೋಗಿದೆ. ಅದೇ ಕಾರು ಅಜೆಕಾರು ಸಮೀಪದ ಗುಡ್ಡೆಯಂಗಡಿ ಎಂಬಲ್ಲಿ ಸ್ಕೂಟರಿಗೆ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಲು ಯತ್ನಿಸಿದಲ್ಲದೇ ಕಾರನ್ನು ಅತೀ ವೇಗವಾಗಿ ಓಡಿಸಿ ಅಮಾಯಕ ರಿಕ್ಷಾ ಚಾಲಕನ ಬಲಿ ಪಡೆದಿದೆ.
ಕಾರು ಚಾಲಕನನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದು, ಈತ ಕಂಠಪೂರ್ತಿ ಕುಡಿದು ಚಾಲನೆ ಮಾಡಿದ್ದಾನೆ ಎಂದು ಆರೋಪಿಸಿ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ. ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.