ಸಾವು ನೋವು ಸಂಭವಿಸುವ ಮೊದಲು ಮುಂಜಾಗೃತ ಕ್ರಮ ಕೈಗೊಳ್ಳಬೇಕು: ವಿನೋದ್ ಶೆಟ್ಟಿ ಪಟ್ಲ



ಕರಾವಳಿಯಲ್ಲಿ ಭಾರೀ ಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಬೃಹತ್ ಆಕಾರದ ಮರಗಳು ಧರೆಗೆ, ರಸ್ತೆಗುರುಳಿ ಪ್ರಾಣ ಹಾನಿ ಸಂಭವಿಸುತ್ತಿದೆ. ಮಳೆಗಾಲ ಪ್ರಾರಂಭವಾಯಿತೆಂದರೆ ಇಂತಹ ಸಮಸ್ಯೆಗಳು ಅಲ್ಲಲ್ಲಿ ಉಲ್ಬಣವಾಗುತ್ತಿದೆ.
ಇಲ್ಲೊಂದು ರಸ್ತೆಯಲ್ಲಿ ಶಾಲಾ ಮಕ್ಕಳು, ವಾಹನ ಸವಾರರು ಸೇರಿದಂತೆ ಸುಮಾರು ಮುನ್ನೂರಕ್ಕೂ ಜನಸಾಮಾನ್ಯರು ಓಡಾಡ್ತಾರೆ. ಆದರೆ ಮಳೆಗಾಲ ಬಂತೆಂದರೆ ಈ ರಸ್ತೆಯುದ್ದಕ್ಕೂ ಸಾಗುವ ಜನರು ಪ್ರಾಣವನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ.. ಅಷ್ಟಕ್ಕೂ ಜನರ ಜೀವನದ ನಡುವೆ ಚೆಲ್ಲಾಟವಾಡುತ್ತಿರುವುದಾದ್ರೂ ಏನು ಅಂತೀರಾ.. ? ಅದೇ ರಸ್ತೆಬದಿಗಳಲ್ಲಿ ರಸ್ತೆಯುದ್ದಕ್ಕೂ ವಾಲಿ ನಿಂತಿರುವ ಮರಗಳ ಸಾಲು..
ಕರೋಪಾಡಿ ಗ್ರಾಮದ ಮಿತ್ತನಡ್ಕ ನೆಲ್ಲಿಕಟ್ಟೆ ರಸ್ತೆಯಲ್ಲಿ ಮಳೆಗಾಲದಲ್ಲಿ ಓಡಾಡುವ ಸವಾರರು, ಮಕ್ಕಳ ಪಾಲಿಗೆ ಯಮ ಸ್ವರೂಪಿಯಂತೆ ಕಾಡುತ್ತಿವೆ ಈ ರಸ್ತೆ ಬದಿಯಲ್ಲಿ ವಾಲಿ ನಿಂತಿರುವ ಮರಗಳು. ಕೆಲ ವರ್ಷಗಳಿಂದ ಈ ಪರಿಸರದ ಸಾರ್ವಜನಿಕರು, ಸಂಬಂಧ ಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಈ ಬಗ್ಗೆ ಯಾವುದೇ ಮುಂಜಾಗೃತ ಕ್ರಮ, ಪರಿಹಾರ ಕ್ರಮಗಳನ್ನು ಸಂಬಂಧ ಪಟ್ಟ ಅಧಿಕಾರಿಗಳು ಕೈಗೊಳ್ಳಲಿಲ್ಲ. ಕಣ್ಣಿದ್ದು ಕುರುಡರಂತೆ ವರ್ತಿಸಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇದೀಗ ಅದೇ ರಾಗ ಅದೇ ತಾಳ ಎಂಬಂತೆ ಮತ್ತೆ ಈ ರಸ್ತೆಬದಿಯಲ್ಲಿದ್ದ ಮರಗಳು ಬಾಗಿ ನಿಂತಿದ್ದು, ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಒಂದೊಂದೇ ಮರಗಳು ರಸ್ತೆಗೆ ಉರುಳಿ ಬೀಳುತ್ತಿವೆ. ಕೆಲ ದಿನಗಳ ಹಿಂದೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಮರ ಉರುಳಿ ಬಿದ್ದು, ಹಾನಿ ಸಂಭವಿಸಿದೆ. ಸಾರ್ವಜನಿಕರ ಪಾಲಿಗೆ ಮೃತ್ಯು ಕೂಪದಂತೆ ಕಾಡುತ್ತಿರುವ ಈ ಮರಗಳನ್ನು ಕಡಿಯುವ ಬಗ್ಗೆ ಅಥವಾ ಈ ಬಗ್ಗೆ ಪರಿಹಾರ ಮಾರ್ಗ ಕೈಗೊಳ್ಳಲು ಸಂಬಂಧಪಟ್ಟ ಯಾವುದೇ ಅಧಿಕಾರ ವರ್ಗ ಮುಂಚೂಣಿ ವಹಿಸೋದಿಲ್ಲ ಯಾಕೆ? ಎಂಬ ವಿಚಾರವೇ ವಿಪರ್ಯಾಸದಂತೆ ಕಾಡಿದೆ.
ಈ ಬಗ್ಗೆ ವಿನೋದ್ ಶೆಟ್ಟಿ ಪಟ್ಲರವರು ಮಾತನಾಡಿ ’ ಈ ಹಿಂದೆ ಈ ಸಮಸ್ಯೆಯ ಬಗ್ಗೆ ಕರೋಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ, ಅರಣ್ಯ ಇಲಾಖಾಧಿಕಾರಿಗಳ ಗಮನಕ್ಕೆ ಸಾಕಷ್ಟು ಬಾರಿ ತಂದಿದ್ದೇನೆ. ಆದರೆ ಈ ಬಗ್ಗೆ ಯಾವ ಅಧಿಕಾರಿ ವರ್ಗದವರೂ ಸ್ಪಂದಿಸಿಲ್ಲ, ಇದೀಗ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಿರುತ್ತೇನೆ. ಸಾವು ನೋವು ಸಂಭವಿಸುವ ಮೊದಲು ಈ ಬಗ್ಗೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.








