ಕಾಸರಗೋಡು: ಶ್ವಾಸನಾಳದಲ್ಲಿ ಜೀರುಂಡೆ ಸಿಲುಕಿ ಒಂದು ವರ್ಷದ ಮಗು ಸಾವು ಶ್ವಾಸನಾಳದಲ್ಲಿ ಜೀರುಂಡೆ ಸಿಲುಕಿ ಒಂದು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ನಗರ ಹೊರವಲಯದ ನುಳ್ಳಿಪ್ಪಾಡಿ ಚೆನ್ನಿಕೆರೆಯ ಸತ್ಯೇಂದ್ರ-ರಂಜಿನಿ ದಂಪತಿ ಪುತ್ರ ಅನ್ವೇದ್ ಮೃತಪಟ್ಟ ಮಗು. ರಾತ್ರಿ ಮನೆಯಲ್ಲಿ ಆಟವಾಡುತ್ತಿದ್ದ ಮಗು ಪ್ರಜ್ಞೆ ತಪ್ಪಿ ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತ್ತಾದರೂ ಆ ವೇಳೆ ಮಗು ಮೃತಪಟ್ಟಿದೆ.
ತಪಾಸಣೆಯಿಂದ ಮಗುವಿನ ಸಾವಿಗೆ ಕಾರಣ ತಿಳಿದುಬಂದಿರಲಿಲ್ಲ. ಹಾಗಾಗಿ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಶ್ವಾಸನಾಳದಲ್ಲಿ ಸಣ್ಣ ಜೀರುಂಡೆ ಮರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಟವಾಡುತ್ತಿದ್ದ ಸಂದರ್ಭ ಮಗು ಜೀರುಂಡೆ ಮರಿಯನ್ನು ನುಂಗಿರಬಹುದು ಎಂದು ಶಂಕಿಸಲಾಗಿದೆ. ಇದರಿಂದ ಉಸಿರುಗಟ್ಟಿ ಮೃತಪಟ್ಟಿರಬಹುದು ಎನ್ನಲಾಗಿದೆ.
ಆಟವಾಡುತ್ತಿದ್ದ ಮಗು ಒಮ್ಮೆಲೇ ಕುಸಿದು ಬಿದ್ದುದ್ದನ್ನು ಕಂಡ ಮನೆಯವರು ಗಾಬರಿಗೊಂಡ ಬೊಬ್ಬೆ ಹಾಕಿದಾಗ ಸ್ಥಳೀಯರು ಧಾವಿಸಿ ಬಂದು ಸ್ಥಳೀಯ ಆಸ್ಪತ್ರೆಗೆ ತಲಪಿಸಿದರು. ಆದರೆ, ಆಗಲೇ ಮಗು ಮೃತಪಟ್ಟಿತ್ತು. ಬಳಿಕ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಕಾಸರಗೋಡು ನಗರ ಠಾಣಾ ಪೊಲೀಸರು ಮಹಜರು ನಡೆಸಿದರು.