ಮಕ್ಕಳನ್ನು ಸಾಂಕೇತಿಕ ರೂಪದಲ್ಲಿ ಶ್ರೀ ದೇವಿಗೆ ಸಮರ್ಪಿಸುವುದು ಇಲ್ಲಿನ ವಿಶೇಷತೆ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಕಾಣ ಸಿಗುವ ಇತಿಹಾಸ ಪ್ರಸಿದ್ಧ ದೇವಾಲಯವೇ ಕೇಪು ಶ್ರೀ ಉಳ್ಲಾಲ್ತಿ (ದುರ್ಗಾಪರಮೇಶ್ವರಿ) ದೇವಸ್ಥಾನ.
ವಿಟ್ಲ ಸೀಮೆಯ ಹತ್ತು ಭಾಗದ ಜನರ ಆರಾಧ್ಯ ದೇವರಾದ ಕೇಪು ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ಪ್ರತೀ ವರ್ಷವೂ ಡಿ. 17 ರಂದು ನಡೆಯುವ ಕಲಾವಧಿ ಕಜಂಬು ಉತ್ಸವವು ಇತಿಹಾಸ ಪ್ರಸಿದ್ದಿಯಾಗಿದೆ.
ಮಕ್ಕಳನ್ನು ಸಾಂಕೇತಿಕ ರೂಪದಲ್ಲಿ ಶ್ರೀ ದೇವಿಗೆ ಸಮರ್ಪಿಸುವ ಈ ಕಜಂಬು ಉತ್ಸವದಲ್ಲಿ ಈ ಭಾಗದ ಜನರು ಅವರಿಗೆ ಹುಟ್ಟುವ ಮಕ್ಕಳನ್ನು ಸಾಂಕೇತಿಕವಾಗಿ ದೇವಿಗೆ ಸಮರ್ಪಿಸುವುದು ಇಲ್ಲಿನ ವಾಡಿಕೆ. ಕೇಪು ಶ್ರೀ ಉಳ್ಲಾಲ್ತಿ ದೇವಿಯು ತನಗೆ ಮಕ್ಕಳಿಲ್ಲದ ಕೊರಗನ್ನು ನೀಗಿಸಲು ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಹುಟ್ಟುವ ಪ್ರತಿಯೊಂದು ಕಂದಮ್ಮಗಳನ್ನು ಇಲ್ಲಿ ಕರೆಸಿ ಪವಿತ್ರ ನೀರಿನಲ್ಲಿ ಸ್ನಾನ ಮಾಡಿಸುವುದು ಹಾಗೂ ದೇವಸ್ಥಾನದಲ್ಲಿ ಮಕ್ಕಳು ಕೂಗುವ ಶಬ್ದ ಕೇಳಲೆಬೇಕು, ಆಗಲೇ ದೇವಿಯು ಸಂತುಷ್ಠಳಾಗುತ್ತಾಳೆ ಎಂಬುವುದು ಇಲ್ಲಿನ ನಂಬಿಕೆ.
ಯಾವುದೇ ವ್ಯಾಪಾರ ವಹಿವಟುಗಳಿಲ್ಲದ ಈ ಜಾತ್ರಾ ಮಹೋತ್ಸವದಲ್ಲಿ ಭಕ್ತ ಸಾಗರ ಹರಿದು ಬರುತ್ತಾರೆ. ಅಪಾರ ನಂಬಿಕೆ ಹಾಗೂ ಭಕ್ತಿಗೆ ಹೆಸರುವಾಸಿಯಾದ ಈ ದೇವಾಲಯವು ಪುರಾತನ ಕಾಲದಿಂದಲೂ ತನ್ನದೇ ಐತಿಹ್ಯ ಹಾಗೂ ಕಾರ್ಣಿಕವನ್ನು ಎತ್ತಿ ಹಿಡಿದು ಭಕ್ತರನ್ನು ಸಲಹಿಕೊಂಡು ಬರುತ್ತಿರುವುದು ಇಲ್ಲಿನ ವಿಶೇಷತೆ. ಈ ದೇವಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಮಾತ್ರವಲ್ಲದೆ, ರಾಜ್ಯದ ಹಲವು ಕಡೆಗಳಿಂದ ಹಾಗೂ ಹೊರ ರಾಜ್ಯ ಕೇರಳದಿಂದಲೂ ಭಕ್ತರು ಆಗಮಿಸುತ್ತಾರೆ.