ಕೇರಳ: ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸಲು ಇದೀಗ ಕೋವಿಡ್ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ.
ಇಲ್ಲಿನ ಕರಿಪುರಂ ವಿಮಾನ ನಿಲ್ದಾಣಕ್ಕೆ ಯುಎಇ ಇಂದ ಬಂದಿದ್ದ ವಿಮಾನದಿಂದ ಇಳಿದಿದ್ದ ಕರ್ನಾಟಕದ ಭಟ್ಕಳ ಮೂಲದ ಅಮರ್ ಎನ್ನುವಾತ ಮಾಸ್ಕ್ ನೊಳಗೆ ಸುಮಾರು 2 ಲಕ್ಷ ಮೌಲ್ಯದ 40 ಗ್ರಾಂ ಚಿನ್ನವನ್ನು ಅಕ್ರಮವಾಗಿ ಕೊಂಡೊಯ್ಯಲು ಪ್ರಯತ್ನಿಸಿದ ಘಟನೆ ನಡೆದಿದೆ.
ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡಲು ಅನೇಕರು ವಿವಿಧ ರೀತಿಯ ಪ್ರಯತ್ನ ನಡೆಸುತ್ತಾರೆ. ಈ ಹಿಂದೆ, ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ್ದಕ್ಕಾಗಿ ಹಲವರನ್ನು ಬಂಧಿಸಿರುವ ಪ್ರಕರಣಗಳೂ ಇವೆ. ಪ್ಯಾಂಟ್ ನ ಸೊಂಟದ ಭಾಗದಲ್ಲಿ, ಬೂಟುಗಳ ಒಳಭಾಗದಲ್ಲಿ ಚಿನ್ನವನ್ನಿಟ್ಟುಕೊಂಡು ಸಾಗಿಸಲು ಯತ್ನಿಸಿರುವುದೂ ಇದೆ.
ಆದರೆ, ಕರಿಪುರಂನಲ್ಲಿ ಇದೇ ಮೊದಲ ಬಾರಿಗೆ ಮಾಸ್ಕ್ ನಲ್ಲಿ ಚಿನ್ನವನ್ನಿಟ್ಟುಕೊಂಡು ಸಾಗಿಸಲು ಯತ್ನಿಸಿದ್ದು, ಕೋಝಿಕೋಡ್ ಏರ್ ಇಂಟಲಿಜೆನ್ಸಿ,ಕ್ಯಾಲಿಕಟ್ ಯುನಿಟ್, ಕೊಚ್ಚಿನ್ ಕಸ್ಟಮ್ಸ್ ಪ್ರಿವೆಂಟಿವ್ ಅಧಿಕಾರಿಗಳು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.