ಪುತ್ತೂರು: ಕೇರಳದಲ್ಲಿ ಕೊರೊನಾ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳದಿಂದ ಕರ್ನಾಟಕ ಸಂಪರ್ಕಿಸುವ ರಸ್ತೆಯನ್ನು ಮುಚ್ಚಲಾಗಿದೆ. ಕೇರಳದಿಂದ ಕರ್ನಾಟಕ ಸಂಪರ್ಕಿಸುವ ಒಳ ರಸ್ತೆಯಲ್ಲೊಂದಾದ ಮಯ್ಯಾಳ-ಕುದ್ರೋಳಿ ರಸ್ತೆಯನ್ನು ಮೇಲಾಧಿಕಾರಿಗಳ ಆದೇಶದಂತೆ ನೆ.ಮುಡ್ನೂರು ಗ್ರಾ.ಪಂ ಅಧಿಕಾರಿಗಳು ಆ.3ರಂದು ಬೇಲಿ ಹಾಕಿ ಮುಚ್ಚಲಾಗಿತ್ತು.
ಆದರೆ ಆ.4ರಂದು ಬೆಳಿಗ್ಗೆ ಬಂದು ನೋಡುವಾಗ ಬೇಲಿ ಏಕಾಏಕಿ ಮಾಯವಾಗಿದೆ. ವಿಷಯ ತಿಳಿದು ಗ್ರಾ.ಪಂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ನೋಡಿದಾಗ ತಾವು ರಸ್ತೆಗೆ ಅಡ್ಡಲಾಗಿ ನಿರ್ಮಾಣ ಮಾಡಿದ್ದ ಬಿದಿರಿನ ಬೇಲಿಯು ಸ್ಥಳೀಯ ಸೇತುವೆಯ ಕೆಳಗಡೆ ನೀರಿನಲ್ಲಿ ತೇಲುತ್ತಿತ್ತು
ಈ ಬೇಲಿ ಹಾಕಿ ಮುಚ್ಚಿರುವ ಬಗ್ಗೆ ಅಲ್ಲಿನ ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಮಯ್ಯಾಳ-ಕುದ್ರೋಳಿ ಭಾಗದವರು ಬಹುತೇಕ ಕೆಲಸಗಳಿಗೆ ಈಶ್ವರಮಂಗಲ ಪೇಟೆಯನ್ನು ಅವಲಂಬಿಸಿರುವ ಕಾರಣ ಬೇಲಿ ಹಾಕಿರುವುದರಿಂದ ಆ ಭಾಗದ ಜನರು ಅಸಮಧಾನಗೊಂಡಿದ್ದರು ಎಂದು ತಿಳಿದುಬಂದಿದೆ. ಇದರಿಂದಾಗಿ ಈ ಕೃತ್ಯವೆಸಗಿರಬಹುದು ಎನ್ನಲಾಗಿದೆ.