ಕಾಲೇಜು ಆವರಣದಲ್ಲೇ ಮಚ್ಚು-ಲಾಂಗ್ಗಳಿಂದ ಕೊಚ್ಚಿ PUC ವಿದ್ಯಾರ್ಥಿಯ ಬರ್ಬರ ಹತ್ಯೆಯಾಗಿರುವ ಭೀಕರ ಘಟನೆ ಕೋಲಾರ ಜಿಲ್ಲೆಯ ಪೇಟೆಚಾಮನಹಳ್ಳಿ ಬಡಾವಣೆಯಲ್ಲಿ ನಡೆದಿದೆ.
ಕಾರ್ತಿಕ್ ಸಿಂಗ್ (17) ಕೊಲೆಯಾದ ವಿದ್ಯಾರ್ಥಿ. ಹತ್ಯೆಯಾಗಿರುವ ವಿದ್ಯಾರ್ಥಿ ಪ್ರಥಮ ಪಿಯುಸಿ ಓದುತ್ತಿದ್ದ. ಮಗ ಚೆನ್ನಾಗಿ ಓದಿ ಉತ್ತಮ ಭವಿಷ್ಯ ಕಟ್ಟಿಕೊಳ್ಳುತ್ತಾನೆ ಎಂದು ಕನಸು ಹೊತ್ತಿದ್ದ ಪೋಷಕರು ಎದೆಯೆತ್ತರಕ್ಕೆ ಬೆಳೆದು ನಿಂತಿದ್ದ ಮಗನನ್ನು ಕಳೆದುಕೊಂಡು ಕಣ್ಣೀರಾಕುತ್ತಿದ್ದಾರೆ.
ಕಾರ್ತಿಕ್ ನಿನ್ನೆ ಶಾಲೆಗೆ ಹೋಗಿರಲಿಲ್ಲ. ಹೊಟ್ಟೆ ನೋವು ಇತ್ತು ಎಂಬ ಕಾರಣದಿಂದ ರಜೆ ಹಾಕಿ ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದ. ಇದ್ದಕ್ಕಿದ್ದಂತೆ ಸ್ನೇಹಿತರಿಂದ ಕರೆಯೊಂದು ಬಂದಿದೆ ಬಳಿಕ ಅಮ್ಮನಿಗೆ ತಿಳಿಸಿ ಹೊರಗಡೆ ಹೋಗಿದ್ದ. ರಾತ್ರಿ 7:30 ರಿಂದ 8 ಗಂಟೆ ಸುಮಾರಿಗೆ ಶಾಲಾ ಆವರಣದಲ್ಲಿ ದುಷ್ಕರ್ಮಿಗಳು ಯುವಕನನ್ನ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಹೋಗಿ ಬರುತ್ತೇನೆ ಅಮ್ಮ ಎಂದು ಹೇಳಿದ್ದ ಕಾರ್ತಿಕ್ ಮನೆಗೆ ಮರಳಿದ್ದು ಶವವಾಗಿ. ಇನ್ನು ಕಾರ್ತಿಕ್ ಮೃತ ದೇಹದ ಮೇಲೆ ಲಾಂಗು-ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಿರುವ ಗುರುತುಗಳು ಪತ್ತೆಯಾಗಿವೆ. ಜೊತೆಗಿದ್ದ ಯುವಕರ ಗ್ಯಾಂಗ್ ಕೊಲೆ ಮಾಡಿರುವ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.