ಉಡುಪಿ:ದಕ್ಷಿಣ ಭಾರತದ ಪ್ರಸಿದ್ಧ ದೇವಿಯ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕೆ ಕ್ಷೇತ್ರದಿಂದ ಕೊಡಚಾದ್ರಿಗೆ ತೆರಳಲು ರೋಪ್ ವೇ ನಿರ್ಮಾಣ ಪ್ರಸ್ತಾವನೆಗೆ ಜೀವ ಬಂದಿದೆ.
ಪ್ರವಾಸಿಗರು ತೆರಳಲು ಅತ್ಯಾಧುನಿಕ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೋಪ್ ವೇ ಕಾಮಗಾರಿಯ ಡಿ.ಪಿ.ಆರ್. ಸರ್ವೇ ಕಾರ್ಯಕ್ಕೆ ಚಾಲನೆ ನೀಡಲಾಯ್ತು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಚಾಲನೆ ನೀಡಿದ್ದಾರೆ. ದೇಶದಲ್ಲಿಯೇ ಅತೀ ಉದ್ದದ ರೋಪ್ ವೇ ಇದಾಗಿದ್ದು ಯುರೋಪ್ ಮಾದರಿಯಲ್ಲಿ ನಿರ್ಮಿಸಲಾಗುತ್ತದೆ. ಇ.ಪಿ.ಐ.ಎಲ್ ಕಂಪೆನಿ ಈ ಸರ್ವೇ ಕಾರ್ಯ ನಡೆಸಲಿದೆ. ಈ ವೇಳೆ ಮಾತನಾಡಿದ ಶಾಸಕ ಸುಕುಮಾರ್ ಶೆಟ್ಟಿ, ಕೊಲ್ಲೂರು- ಕೊಡಚಾದ್ರಿ ರೋಪ್ ವೇ ಬಹುವರ್ಷಗಳ ಕನಸಾಗಿದ್ದು ಇದರಿಂದ ಪ್ರವಾಸೋದ್ಯಮ ಇನ್ನಷ್ಟು ವೃದ್ಧಿಸುತ್ತದೆ.
ಯಾವುದೇ ಕಾರಣಕ್ಕೂ ಪರಿಸರ, ಅರಣ್ಯಗಳಿಗೆ ಹಾನಿಯಾಗದಂತೆ ವೈಜ್ಞಾನಿಕ ರೀತಿಯ ಕಾಮಗಾರಿ ನಡೆಸಲಾಗುತ್ತದೆ. ರೋಪ್ ವೇ ನಿರ್ಮಾಣದಿಂದ ಕೊಲ್ಲೂರು ಭಾಗದ ಬಾಡಿಗೆ ಜೀಪು ಚಾಲಕರಿಗೆ ಸಮಸ್ಯೆ ಯಾಗುವುದಿಲ್ಲ.ಬದಲಾಗಿ ರೋಪ್ ವೇ ಆರಂಭವು ನಿರ್ದಿಷ್ಟ ಪ್ರದೇಶದಲ್ಲಿ ಆಗುವುದರಿಂದ ಜೀಪುಗಳ ಅವಶ್ಯಕತೆ ಮುಂದೆಯೂ ಇರಲಿದೆ ಎಂದರು.