ಕೊಪ್ಪಳ: ಜಿಲ್ಲೆಯ ಕಾರಟಗಿ ನಗರದಲ್ಲಿ ದಂಪತಿ ಮೇಲೆ ರಾಡ್ನಿಂದ ಹಲ್ಲೆ ಮಾಡಿ ಮಹಿಳೆ ಹತ್ಯೆ ಮಾಡಿದ್ದ ಪ್ರಕರಣ ಇದೀಗ ಮರ್ಯಾದಾ ಹತ್ಯೆ ಎಂಬುದು ಬಹುತೇಕ ದೃಢವಾಗಿದೆ. ಮೂಲತಃ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ 31 ವರ್ಷದ ವಿನೋದ್ ತನಗಿಂತ ವಯಸ್ಸಿನಲ್ಲಿ ಸೀನಿಯರ್ ಆಗಿದ್ದ 34 ವರ್ಷದ ತ್ರಿವೇಣಿಯನ್ನು 7 ತಿಂಗಳ ಹಿಂದೆ ಮದುವೆಯಾಗಿದ್ದ. ಅಂತರ್ ಜಾತಿ ಎಂಬ ಕಾರಣಕ್ಕೆ ಮದುವೆಗೆ ವಿರೋಧಿಸಿದ್ದ ಮೃತ ತ್ರಿವೇಣಿಯ ಸಹೋದರನೇ ಹತ್ಯೆ ಮಾಡಿದ್ದಾನೆ.
ಕೃತ್ಯ ನಡೆದ ಕೆಲವೇ ಗಂಟೆಯಲ್ಲಿ ಪ್ರಕರಣದ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಕೊಪ್ಪಳ ಎಸ್ಪಿ ಟಿ.ಶ್ರೀಧರ ನೇತೃತ್ವದ ಪೊಲೀಸ್ ತಂಡ ಯಶಸ್ವಿಯಾಗಿದ್ದು, ಮೃತಳ ತಮ್ಮನೇ ಕೃತ್ಯದ ರೂವಾರಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕು ಕಾಕನಕಟ್ಟೆ ಗ್ರಾಮದ ಮೃತ ತ್ರಿವೇಣಿ ಸಹೋದರ ಅವಿನಾಶ(27), ಸಹೋದರ ಸಂಬಂಧಿ ಕುಮಾರ (26) ತನ್ನ ಒಬ್ಬ ಸ್ನೇಹಿತನೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾರೆ. ಕೃತ್ಯದ ರೂವಾರಿ ಅವಿನಾಶನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಕೊಲೆ ಮಾಡಿರುವ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕಳೆದ 4 ದಿನದಿಂದ ಕಾರಟಗಿಗೆ ಬಂದಿರುವ ಈ ಮೂವರು ಸೇರಿ ತ್ರಿವೇಣಿಯ ಕೊಲೆಗೆ ಸಂಚು ರೂಪಿಸಿದ್ದಾರೆ. ಒಂದೆರಡು ಬಾರಿ ಹತ್ಯೆಗೆ ಯತ್ನಿಸಿ ವಿಫಲವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತ ತ್ರಿವೇಣಿಯ ಕಿರಿಯ ಸಹೋದರ ಅವಿನಾಶ ಅಕ್ಟೋಬರ್ 16ಕ್ಕೆ ವಾಪಾಸ್ ತಮ್ಮ ಊರಿಗೆ ಹೋಗಿದ್ದು, ಇವರಿಬ್ಬರೂ ಕಾರಟಗಿಯಲ್ಲೇ ಉಳಿದುಕೊಂಡು ಅಕ್ಟೋಬರ್ 17ರ ರಾತ್ರಿ 7ಕ್ಕೆ ಬಸವೇಶ್ವರ ನಗರದಲ್ಲಿನ ಇವರ ಮನೆ ಸಮೀಪದಲ್ಲೇ ರಾಡ್ನಿಂದ ಹಲ್ಲೆ ಮಾಡಿ ಹತ್ಯೆ ಎಸಗಿದ್ದಾರೆ.
ತ್ರಿವೇಣಿ(34) ಸ್ಥಳದಲ್ಲೇ ಮೃತಪಟ್ಟಿದ್ದು, ವಿನೋದ(31) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವಿನೋದ ಕೂಡ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದ್ದು, ಪೊಲೀಸರು, ಕೋಮಾ ಸ್ಥಿತಿಯಲ್ಲಿದ್ದಾನೆ ಎಂದು ಹೇಳಿದ್ದಾರೆ.ಒಟ್ಟಾರೆ ಇಡೀ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದರೆ ಇದೂ ಸಹ ಒಂದು ಮರ್ಯಾದಾ ಹತ್ಯೆ ಎಂಬ ಅನುಮಾನಗಳು ಬಲವಾಗಿವೆ.