


ಕುಡುಪು ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯ ಕೇಳಿ ಫೇಸ್ಬುಕ್ನಲ್ಲಿ ಹಾಕಿದ್ದ ಪೋಸ್ಟ್ ನೆಪವಾಗಿರಿಸಿಕೊಂಡು ನನ್ನ ತೇಜೋವಧೆ ಮಾಡುವ ಕೃತ್ಯ ನಡೆದಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದೇನೆ. ನೂತನ ಪೊಲೀಸ್ ಕಮಿಷನರ್ ಮೇಲೆ ಭರವಸೆ ಇದೆ. ಮಾನಸಿಕವಾಗಿ ತೊಳಲಾಟಕ್ಕೆ ಕಾರಣವಾಗಿ ನನ್ನ ಈ ಸ್ಥಿತಿಗೆ ಎಸಿಪಿ ಪ್ರಕಾಶ್ ಹಾಗೂ ವಾಮಂಜೂರು ಎಸ್ಐ ಅರುಣ್ ನೇರ ಕಾರಣ’ ಎಂದು ಮಂಗಳೂರಿನ ಸಜಿತ್ ಶೆಟ್ಟಿ ಎಂಬವರು ಫೇಸ್ಬುಕ್ ಲೈವ್ನಲ್ಲಿ ಆರೋಪಿಸಿದ್ದಾರೆ.
‘ಕುಡುಪುವಿನಲ್ಲಿ ನಡೆದ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂದಿಸಿ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿಲ್ಲ ಎಂಬುದಾಗಿ ನಾನು ಕಳೆದ ಹಲವು ಸಮಯದಿಂದ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕುತ್ತಿದ್ದೆ. ಈ ಬಗ್ಗೆ ನಿನ್ನೆ ಸಂಜೆ ಉರ್ವಾ ಠಾಣೆಯಿಂದ ಕರೆ ಬಂದಿದ್ದು ಹೇಳಿಕೆ ದಾಖಲಿಸಿಕೊಳ್ಳಲು ಠಾಣೆಗೆ ಬರುವಂತೆ ತಿಳಿಸಿದ್ದರು. ಅದರಂತೆ ನಾನು ಬೆಳಗ್ಗೆ ಠಾಣೆಗೆ ನನ್ನ ಕರ್ತವ್ಯದ ಸ್ಥಳದಿಂದ ತೆರಳಿದ್ದೆ. ಅಲ್ಲಿದ್ದ ಎಸಿಪಿ ರವೀಶ್ ನಾಯಕ್ರವರು ಪ್ರಕರಣದ ತನಿಖೆಯ ಬಗ್ಗೆ ಸಂಶಯದ ರೀತಿಯಲ್ಲಿ ನೀವು ಪೋಸ್ಟ್ ಮಾಡಿದ್ದು, ಆ ಬಗ್ಗೆ ಹೇಳಿಕೆ ನೀಡುವಂತೆ ತಿಳಿಸಿದ್ದರು. ನಾನು ಪ್ರಕರಣದ ಬಗ್ಗೆ ಆರಂಭದಿಂದಲೂ ವಹಿಸಿರುವ ಮುತುವರ್ಜಿಯ ಬಗ್ಗೆ ಹೇಳಿಕೆ ನೀಡಿ ವಾಪಾಸಾಗಿದ್ದೆ. ಸಂಜೆ ಮತ್ತೆ ನನಗೆ ಪೊಲೀಸ್ ಠಾಣೆಗೆ ಬರುವಂತೆ ತಿಳಿಸಲಾಯಿತು. ಆ ಸಂದರ್ಭ ಅಲ್ಲಿದ್ದ ಎಸಿಪಿ ಪ್ರಕಾಶ್ ಹಾಗೂ ವಾಮಂಜೂರು ಎಸ್ಐ ಅರುಣ್ ನಿಮ್ಮ ಬೆಳಗಿನ ಹೇಳಿಕೆ ಸರಿಯಾಗಿಲ್ಲ. ನಿನ್ನಲ್ಲಿ ಸಾಕ್ಷಿ ಇದೆಯೇ ಸಾಕ್ಷಿ ಇಲ್ಲದಿದ್ದರೆ ಎಫ್ಐಆರ್ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ನನ್ನ ಜತೆ ಕೊಲೆ ಆರೋಪಿಯಂತೆ ನಡೆದುಕೊಂಡಿದ್ದಾರೆ. ನನ್ನ ಮೊಬೈಲ್ನಿಂದ ಕ್ಷಮಾಪಣೆ ವೀಡಿಯೋ ಮಾಡಿಸಿ ಪೋಸ್ಟ್ ಮಾಡಿಸಿದ್ದಾರೆ. ಇದನ್ನು ಬಿಜೆಪಿಯ ಕಾರ್ಯಕರ್ತರು ವೈರಲ್ ಮಾಡಿದ್ದು, ಇದರಿಂದ ನನ್ನ ತೇಜೋವಧೆಯಾಗಿದೆ. ನನ್ನ ಹಾಗೂ ಕುಟುಂಬದವರಿಗೆ ಅವಾಚ್ಯ ರೀತಿ ಯಿಂದ ಹಲವರು ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಇದರಿಂದ ನಾನು ಮಾನಸಿಕವಾಗಿ ಜರ್ಝರಿತ ನಾಗಿದ್ದೇನೆ. ನನ್ನ ಈ ಪರಿಸ್ಥಿತಿಗೆ ಎಸಿಪಿ ಪ್ರಕಾಶ್ ಹಾಗೂ ಎಸ್ಐ ಅರುಣ್ ಹಾಗೂ ಬಿಜೆಪಿ ಕಾರ್ಯಕರ್ತರು ಕಾರಣರಾಗಿದ್ದು, ನೊಂದು ಈ ಬಗ್ಗೆ ಲೈವ್ ಬಂದು ಮಾತನಾಡಿದ್ದೇನೆ’ ಎಂದು ಸಜಿತ್ ಶೆಟ್ಟಿ ಹೇಳಿಕೊಂಡಿದ್ದಾರೆ’








