ಸುಬ್ರಹ್ಮಣ್ಯ: ಸರ್ಕಾರದ ಆದೇಶ ಪಾಲನೆಯ ಕಾರಣಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಬುಧವಾರ ಸರ್ಪ ಸಂಸ್ಕಾರ ಸೇವೆಯನ್ನು ಬಂದ್ ಮಾಡಲಾಗಿದೆ.
ಈ ಮಾಹಿತಿ ಅರಿಯದೆ ದೂರದ ಊರುಗಳಿಂದ ಪ್ರಸಿದ್ಧ ನಾಗಕ್ಷೇತ್ರವಾಗಿರುವ ಕುಕ್ಕೆಗೆ ಬಂದಿರುವ ಭಕ್ತರು, ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.
‘ಸರ್ಪ ಸಂಸ್ಕಾರ ನಡೆಸಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದೆವು. 2-3 ತಿಂಗಳುಗಳ ಹಿಂದೆ ಸರ್ಪ ಸಂಸ್ಕಾರ ಸೇವೆಯನ್ನು ಬುಕ್ ಮಾಡಲಾಗಿತ್ತು. ನಮಗೆ ನೀಡಿದ್ದ ದಿನಾಂಕಕ್ಕೆ ಅನುಗುಣವಾಗಿ ಬುಧವಾರ ದೇವಾಲಯಕ್ಕೆ ಬಂದಿದ್ದೇವೆ. ದೂರದ ಊರುಗಳಿಂದ ಪ್ರಯಾಣ ಮಾಡಿ ಬಂದಿರುವ ನಮಗೆ, ಈಗ ಸೇವೆ ಲಭ್ಯ ಇಲ್ಲ ಎಂಬ ಮಾಹಿತಿಯನ್ನು ನೀಡುತ್ತಿದ್ದಾರೆ’ ಎಂದು ಭಕ್ತರು ದೂರಿದರು. ಜಗಳ ತಾರಕ್ಕಕ್ಕೇರುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಆಡಳಿತ ಮಂಡಳಿ ಭಕ್ತರೊಂದಿಗೆ ಮಾತುಕತೆ ನಡೆಸಿದ್ದು ಮುಂಗಡ ಬುಕ್ ಮಾಡಿ ಹಣ ಕಟ್ಟಿದ ಭಕ್ತಾದಿಗಳಿಗೆ ಹಣ ವಾಪಾಸು ನೀಡಿದ್ದಾರೆ. ಮುಂದಿನ ದಿನಾಂಕವನ್ನು ಭಕ್ತರೇ ನಿಗದಿಪಡಿಸುವಂತೆ ಆಡಳಿತ ಮಂಡಳಿ ಸೂಚನೆ ನೀಡಿದೆ.
‘ಸರ್ಕಾರದ ಆದೇಶ ಪಾಲಿಸುವುದು ಅನಿವಾರ್ಯ. ಸರ್ಪ ಸಂಸ್ಕಾರ ಸೇವೆ ಎರಡು ದಿನ ನಡೆಯುತ್ತದೆ. ಗುರುವಾರಕ್ಕೆ ಸೇವೆಗೆ ಅವಕಾಶ ಇಲ್ಲದ ಕಾರಣ ಈ ಸೇವೆಯನ್ನು ಬುಧವಾರ ಬಂದ್ ಮಾಡಲಾಗಿದೆ’ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಮುಖರು ಸ್ಪಷ್ಟಪಡಿಸಿದರು.
ದೇವಾಲಯದಲ್ಲಿ ಇನ್ನುಳಿದ ಸೇವೆಗಳು ನಡೆಯುತ್ತಿವೆ. ಸರ್ಪ ಸಂಸ್ಕಾರ ಸೇವೆ ಸಲ್ಲಿಸಲು ಬೇರೆ ಬೇರೆ ಊರುಗಳಿಂದ ನೂರಾರು ಜನರು ಬಂದಿದ್ದರು.