ಲಕ್ನೋ: ಅಯೋಧ್ಯೆಯ ಧನ್ನಿಪುರದಲ್ಲಿ ಮಸೀದಿ ನಿರ್ಮಾಣಕ್ಕಾಗಿ ಸಿದ್ಧತೆಗಳು ಆರಂಭವಾಗಿದ್ದು. ಮಸೀದಿಯ ನೀಲನಕ್ಷೆಯನ್ನು ಬಿಡುಗಡೆ ಮಾಡಲಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ನೀಡಿದ್ದ 5 ಎಕರೆ ಭೂಮಿಯಲ್ಲಿ ಹೊಸ ಮಸೀದಿಯ ಸಮುಚ್ಚಯ ತಲೆ ಎತ್ತಲಿದೆ.
ಮಸೀದಿಯ ಹಿಂದೆ ಆಸ್ಪತ್ರೆ ಹಾಗೂ ಮ್ಯೂಸಿಯಂ ಇರುವುದನ್ನು ನೀಲಿ ನಕ್ಷೆಯಲ್ಲಿ ಕಾಣಬಹುದಾಗಿದೆ. ಗಣರಾಜ್ಯೋತ್ಸವದಂದು ಹೊಸ ಮಸೀದಿ ನಿರ್ಮಾಣದ ಮೊದಲ ಹಂತದ ಯೋಜನೆಗೆ ಶಂಕು ಸ್ಥಾಪನೆ ಕಾರ್ಯ ನಡೆಯಲಿದೆ ಅಂತ ವರದಿಯಾಗಿದೆ.
ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್ (ಐಐಸಿಎಫ್) ಮಸೀದಿ ನಿರ್ಮಾಣದ ಹೊಣೆ ಹೊತ್ತಿದೆ.ಲಖನೌ ಮೂಲದ ವಾಸ್ತು ಶಿಲ್ಪಿ ಪ್ರೊ. ಎಸ್.ಎಂ ಅಖ್ತರ್ ಅವರು ಮಸೀದಿಯ ವಿನ್ಯಾಸವನ್ನು ಮಾಡಿದ್ದಾರೆ.ಮೊದಲ ಹಂತದ ಕಾಮಗಾರಿಯಲ್ಲಿ ಮಸೀದಿ ನಿರ್ಮಾಣ ಆಗಲಿದ್ದು, 2ನೇ ಹಂತದಲ್ಲಿ ಮಸೀದಿಯ ಹಿಂಭಾಗ ಆಸ್ಪತ್ರೆ ನಿರ್ಮಾಣವಾಗಲಿದೆ.ಮಸೀದಿಗೆ ಏನಂತ ಹೆಸರು ಇಡಬೇಕೆಂಬುದು ಸದ್ಯಕ್ಕೆ ನಿರ್ಧಾರವಾಗಿಲ್ಲ. ಆದ್ರೆ ಯಾವುದೇ ಚಕ್ರವರ್ತಿ ಅಥವಾ ರಾಜರ ಹೆಸರನ್ನು ನಾಮಕರಣ ಮಾಡುವುದಿಲ್ಲ ಎಂದು ಐಐಸಿಎಫ್ ಸ್ಪಷ್ಟಪಡಿಸಿದೆ.
ವೃತ್ತಾಕಾರದಲ್ಲಿ ನಿರ್ಮಾಣ ಆಗಲಿರುವ ಈ ಮಸೀದಿಯಲ್ಲಿ ಏಕಕಾಲಕ್ಕೆ 2 ಸಾವಿರ ಮಂದಿ ನಮಾಜ್ ಮಾಡಬಹುದು.ಇದರ ಜೊತೆ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ, ಸಮುದಾಯದ ಅಡುಗೆ ಮನೆ ಹಾಗೂ ಗ್ರಂಥಾಲಯ, ಇಂಡೋ ಇಸ್ಲಾಮಿಕ್ ಕೇಂದ್ರ, ಅತ್ಯಾಧುನಿಕ ಮ್ಯೂಸಿಯಂ ಇರಲಿದೆ.ಕಳೆದ ವರ್ಷ ನವೆಂಬರ್ 9 ರಂದು ಸುಪ್ರೀಂಕೋರ್ಟ್ ಹಲವಾರು ವರ್ಷಗಳ ಅಯೋಧ್ಯಾ ಭೂಮಿ ವಿವಾದವನ್ನ ಇತ್ಯರ್ಥಪಡಿಸಿತ್ತು.
ಅಯೋಧ್ಯೆಯ ವಿವಾದಿತದ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿ ಐತಿಹಾಸಿಕ ತೀರ್ಪು ನೀಡಿತ್ತು. ಇದೇ ವೇಳೆ ಮಸೀದಿ ಧ್ವಂಸ ಮಾಡಿದ್ದನ್ನು ಖಂಡಿಸಿದ್ದ ಕೋರ್ಟ್, ಸುನ್ನಿ ವಕ್ಫ್ ಮಂಡಳಿಗೆ ಪರ್ಯಾಯವಾಗಿ ಐದು ಎಕರೆ ಜಾಗವನ್ನು ಅಯೋಧ್ಯೆಯಲ್ಲೇ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಸುಪ್ರೀಂಕೋರ್ಟ್ ಆದೇಶ ಹೊರಬಿದ್ದ ಬೆನ್ನಲ್ಲೇ ರಾಮಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿದ್ದು, ದೇಗುಲ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಇತ್ತ ಮಸೀದಿ ನಿರ್ಮಾಣಕ್ಕೆ ಬ್ಲೂ ಪ್ರಿಂಟ್ ಸಿದ್ಧಗೊಂಡಿದ್ದ, ಮುಂದಿನ ವರ್ಷ ಆರಂಭದಿಂದಲೇ ಮಸೀದಿ ನಿರ್ಮಾಣ ಕೂಡ ಶುರುವಾಗಲಿದೆ.