ಲಕ್ನೋ: ಮೊಬೈಲ್ ಖರೀದಿಗೆ 10 ಸಾವಿರ ರೂಪಾಯಿ ನೀಡದ ಮಲತಾಯಿಯ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಸರ್ದನ್ ವ್ಯಾಪ್ತಿಯಲ್ಲಿ ನಡೆದಿದೆ. 35 ವರ್ಷದ ರೇಷ್ಮಾ ಕೊಲೆಯಾದ ಮಹಿಳೆ.
ಕಸ್ಬೆಯ ಇಸ್ಲಾಮಾಬಾದ್ ನಲ್ಲಿ ಕ್ಲಿನಿಕ್ ಇಟ್ಟುಕೊಂಡಿರುವ ಇಬಾದುರ್ ಖಾನ್ ಕೆಲ ವರ್ಷಗಳ ಹಿಂದೆ ರೇಷ್ಮಾರನ್ನು ಎರಡನೇ ಮದುವೆಯಾಗಿದ್ದರು. ಇಬಾದುರ್ ಖಾನ್ ಪುತ್ರ 19 ವರ್ಷದ ಖೀಜರ್ ಮದ್ಯ ವ್ಯಸನಿಯಾಗಿದ್ದನು. ಹೀಗಾಗಿ ಖೀಜರ್ ನನ್ನು ವ್ಯಸನ ಮುಕ್ತ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಕೆಲ ದಿನಗಳ ಹಿಂದಷ್ಟೆ ಖೀಜರ್ ಮನೆಗೆ ಹಿಂದಿರುಗಿದ್ದನು.
ಮಧ್ಯಾಹ್ನ ಮನೆಗೆ ಬಂದ ಖೀಜರ್ ರೇಷ್ಮಾ ಬಳಿ ಮೊಬೈಲ್ ಖರೀದಿಸಲು ರೂ. 10 ಸಾವಿರ ನೀಡುವಂತೆ ಕೇಳಿದ್ದಾನೆ. ರೇಷ್ಮಾ ಮಗನಿಗೆ ಹಣ ನೀಡಲು ಒಪ್ಪಿರದ ಕಾರಣ, ಇದೇ ವಿಷಯಕ್ಕೆ ಇಬ್ಬರ ಮಧ್ಯೆ ವಾಕ್ ಸಮರವೇ ನಡೆದಿತ್ತು. ಈ ವೇಳೆ ರೇಷ್ಮಾ ಹಣ ಕೊಡುವಂತೆ ಹಠ ಹಿಡಿದ ಮಗನ ಕಪಾಳಕ್ಕೆ ಭಾರಿಸಿದ್ದಾರೆ.
ಇದರಿಂದ ಕೋಪಗೊಂಡ ಖೀಜರ್ ತಾಯಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆಯ ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಖೀಜರ್ ತಂದೆಯ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.