ಬೆಂಗಳೂರು: 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಧ್ವಜಾರೋಹಣ ನೆರವೇರಿಸಿದ್ರು. ಭಾಷಣ ಆರಂಭಕ್ಕೂ ಮೊದಲು ಸ್ವಾತಂತ್ರಕ್ಕಾಗಿ ಹೋರಾಡಿ ತ್ಯಾಗ ಬಲಿದಾನ ಮಾಡಿದವರನ್ನು ಸ್ಮರಿಸಿದರು.
ನಮ್ಮ ಸರ್ಕಾರ ಸವಾಲು ಎದುರಿಸುವಲ್ಲಿ ಅಚಲವಾಗಿದೆ. ಒಂದು ವರ್ಷದಲ್ಲಿ ನಮಗೆ ಹಲವು ಸಮಸ್ಯೆಗಳ ನಡುವೆಯೂ ಅಭಿವೃದ್ಧಿ ಚಕ್ರ ಚಲಿಸಿದೆ. ನೆರೆ ಹಾಗೂ ಕರೊನಾವನ್ನು ಮೆಟ್ಟಿನಿಂತಿದ್ದೇವೆ. ಸಂಕಷ್ಟಕ್ಕೆ ಒಳಗಾದ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಕಾಯಕವೇ ಕೈಲಾಸ, ಸರ್ಕಾರದ ಕೆಲಸ ದೇವರ ಕೆಲಸ ಅನ್ನೋ ತತ್ವ ಪಾಲನೆ ಮಾಡ್ತಿದ್ದೇವೆ ಎಂದರು.
ಕರೋನ ಸಮರ್ಥವಾಗಿ ನಿಭಾಯಿಸುವ ಕೆಲಸ ಮಾಡಿದ್ದೇವೆ. ಬರೀ ಬೆಂಗಳೂರು ಅಷ್ಟೇ ಅಲ್ಲದೇ ಜಿಲ್ಲಾ ಕೇಂದ್ರಗಳಲ್ಲೂ ಫೀವರ್ ಕ್ಲಿನಿಕ್ ಮತ್ತು ಕರೊನಾ ಆಸ್ಪತ್ರೆ ರಚನೆ ಮಾಡಿದ್ದೇವೆ. ಆಯಷ್ಮಾನ್ ಭಾರತ ಅಡಿಯಲ್ಲಿ 1 ಕೋಟಿ 30 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ್ದೇವೆ ಎಂದು ತಿಳಿಸಿದರು.
ಕರೊನಾ ವಾರಿಯರ್ಸ್ ರನ್ನು ಸ್ಮರಿಸಿದ ಸಿಎಂ :
ಲಾಕ್ಡೌನ್ನಿಂದ ಆರ್ಥಿಕ ವ್ಯವಹಾರ ಕುಸಿತ ಕಂಡಿದೆ. ಆದರೆ ಅದೆಲ್ಲದವನ್ನ ದಿಟ್ಟವಾಗಿ ಎದುರಿಸಿ, ವಾಣಿಜ್ಯ ಚಟುವಟಿಕೆಗಳನ್ನು ಮತ್ತೆ ಚೇತರಿಕೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಲಾಕ್ಡೌನ್ನಿಂದ ಅಸಂಘಟಿತ ನೆರವಿಗೆ ಸರ್ಕಾರ ಪರಿಹಾರ ನೀಡಿದೆ. 3 ಸಾವಿರ ಕೋಟಿ ಪರಿಹಾರ ನೀಡಿದ್ದೇವೆ ಎಂದರು. ಇದೇ ವೇಳೆ ಹಗಲಿರುಳು ಕೆಲಸ ಮಾಡಿದ ಕರೊನಾ ವಾರಿಯರ್ಸ್ರನ್ನು ಸಿಎಂ ಸ್ಮರಿಸಿದರು.
ಆನ್ ಲೈನ್ ಶಿಕ್ಷಣದ ಬಗ್ಗೆ ಸಿಎಂ ಬಿಎಸ್ ವೈ ಮಾತು:
ಗ್ರಾಮೀಣ ಭಾಗದಲ್ಲೂ ಆನ್ಲೈನ್ ಶಿಕ್ಷಣ ನೀಡಲು ಚಿಂತನೆ ನಡೆಸಿದ್ದೇವೆ. ವಿದ್ಯಾಧನ ಯೋಜನೆ ಮೂಲಕ ಶಿಕ್ಷಣ ನೀಡಲಾಗುವುದು. ರೈತನಿಗೆ ಕೇಂದ್ರ ಸರ್ಕಾರ ಆರು ಸಾವಿರ ರೂ. ಹಾಗೂ ರಾಜ್ಯ ಸರ್ಕಾರ ನಾಲ್ಕು ಸಾವಿರ ರೂ. ಕೊಡಲಿದೆ. ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ತೊಗರಿ, ಜೋಳ ಖರೀದಿ ಮಾಡಿ ರೈತರ ಸಂಕಷ್ಟಕ್ಕೆ ಸ್ಪಂದಿಸಿದ್ದೇವೆ .ಅಂತರ್ಜಲ ಮಟ್ಟ ಏರಿಕೆ ಮಾಡಲು ರೈತನ ಜತೆಗೆ ಕೆಲಸ ಮಾಡುತ್ತಿದ್ದೇವೆ ಎಂದರು.