ಉಡುಪಿ: ಮೀನು ಲಾರಿಯ ಚಾಲಕನೋರ್ವನನ್ನು ಅಪಹರಿಸಿ ಮನೆಯವರಿಗೆ ಕರೆ ಮಾಡಿ 15 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ನಿವಾಸಿಯಾಗಿರುವ ಸುಲೈಮಾನ್ ಎಂಬವರೇ ಅಪಹರಣಕ್ಕೆ ಒಳಗಾದ ಲಾರಿ ಚಾಲಕ. ಸೆಪ್ಟೆಂಬರ್ 30 ರಂದು ಚಾಲಕ ಸುಲೈಮಾನ್ ಕೆಲಸಕ್ಕೆಂದು ಮಲ್ಪೆಗೆ ಬಂದಿದ್ದರು. ಆದರೆ ಮರು ದಿನ ಸುಲೈಮಾನ್ ಅವರ ತಮ್ಮ ಸಾಧಿಕ್ ಕರೆ ಮಾಡಿದಾಗ ಪೋನ್ ಸ್ವೀಕರಿಸಿರಲಿಲ್ಲ.
ಸುಲೈಮಾನ್ ತಮ್ಮ ಸಾಧಿಕ್ಗೆ ಅಕ್ಟೋಬರ್ 2 ರಂದು ಕರೆಯೊಂದು ಬಂದಿದ್ದು, ತಾನು ಸಮೀರ್ ಮಾತನಾಡುತ್ತಿದ್ದೇನೆ. ಸುಲೈಮಾನ್ನನ್ನು ಮಲ್ಪೆಯಿಂದ ಕಿಡ್ನಾಪ್ ಮಾಡಿದ್ದೇವೆ. ಆತ ಇದೀಗ ನಮ್ಮ ಜೊತೆಯಿದ್ದಾನೆ. ಆತನನ್ನು ಬಿಡಬೇಕಾದ್ರೆ ನಮಗೆ 15 ಲಕ್ಷ ರೂಪಾಯಿ ಹಣವನ್ನು ನೀಡುವಂತೆ ಬೇಡಿಕೆಯಿಟ್ಟಿದ್ದಾರೆ.
ಕೂಡಲೇ ಸುಲೈಮಾನ್ ಅಣ್ಣನಾಗಿರುವ ಸಾದಿಕ್ ಮಲ್ಪೆಗೆ ಬಂದು ವಿಚಾರಣೆಯನ್ನು ಮಾಡಿದ್ದಾರೆ. ಈ ವೇಳೆಯಲ್ಲಿ ಸುಲೈಮಾನ್ನನ್ನು ಕೇರಳದ ಹಸನ್ ಮತ್ತು ಸಹೋದರರು ಕಿಡ್ನಾಪ್ ಮಾಡಿರುವುದಾಗಿ ತಿಳಿದು ಬಂದಿತ್ತು. ಸುಲೈಮಾನ್ ಮೀನು ವ್ಯಾಪಾರದ ಹಿನ್ನೆಲೆಯಲ್ಲಿ ತಮಗೆ 15 ಲಕ್ಷ ರೂಪಾಯಿಯನ್ನು ನೀಡಬೇಕು. ಹಣವನ್ನು ನೀಡಿ ಆತನನ್ನು ಕರೆದುಕೊಂಡು ಹೋಗಿ ಎಂದು ಸಮೀರ್ ಎಂಬಾತ ಕರೆ ಮಾಡಿ ತಿಳಿಸಿದ್ದಾನೆ.
ಕರೆದುಕೊಂಡು ಹೋಗದೇ ಇದ್ರೆ ಆತನನ್ನು ಕೊಂದು ಸಮುದ್ರಕ್ಕೆ ಬಿಸಾಡುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಸಾದಿಕ್ ಅವರು ಮಲ್ಪೆ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.