ನಾಲ್ಕು ದಶಕಗಳಿಂದ ಹಲವಾರು ಓದುಗರ ಮನಗೆದ್ದ ವಾರಪತ್ರಿಕೆ ‘ಮಂಗಳ’ ತನ್ನ ಮುದ್ರಣವನ್ನು ಸ್ಥಗಿತಗೊಳಿಸಿದೆ. ಈ ಕುರಿತು ವಾರ ಪತ್ರಿಕೆ ಮಂಗಳದ ಸಂಪಾದಕರು ಅಧಿಕೃತ ಪ್ರಕಟನೆಯನ್ನು ಹೊರಡಿಸಿದ್ದು,ಈ ವಾರ ಕೊನೆಯ ಸಂಚಿಕೆ ಮುದ್ರಣಗೊಂಡಿದೆ ಎಂದು ತಿಳಿಸಿದ್ದಾರೆ.
40 ವರ್ಷಗಳಿಂದ ಹಲವಾರು ಜನಪ್ರಿಯ ಧಾರಾವಾಹಿಗಳನ್ನು ತನ್ನ ಪತ್ರಿಕೆಯಲ್ಲಿ ಪ್ರಕಟ ಮಾಡುವ ಮೂಲಕ ಯುವಜನರ ಮನಸ್ಸನ್ನು ಗೆದ್ದು, ಕನ್ನಡಿಗರ ಮನೆ ಮಾತಾಗಿದ್ದ ಮಂಗಳ ಪತ್ರಿಕೆ ತನ್ನ ಯಾನ ನಿಲ್ಲಿಸಿರುವುದರಿಂದಾಗಿ ಅನೇಕ ಓದುಗರ ನಿರಾಸೆಗೊಂಡಿದ್ದಾರೆ.
ಕೊರೋನಾ ನಂತರ ಪತ್ರಿಕೋದ್ಯಮಕ್ಕೆ ಸಾಕಷ್ಟು ಸಂಕಟಗಳು ಎದುರಾಯಿತು. ಡಿಜಿಟಲ್ ಮಾಧ್ಯಮಗಳು ವೇಗ ಪಡೆದುಕೊಂಡವು. ಇದು ಮಂಗಳ ವಾರಪತ್ರಿಕೆಗೆ ಕೂಡ ಪರಿಣಾಮವನ್ನು ಉಂಟು ಮಾಡಿತು. ಹಾಗಿದ್ದೂ ಕಳೆದ ಮೂರು ವರ್ಷಗಳ ಕಾಲ ಮಂಗಳವನ್ನು ಮುನ್ನಡೆಸಿದರು.ಇದೀಗ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ಅನಿವಾರ್ಯವಾಗಿ ಪತ್ರಿಕೆ ಮುದ್ರಣ ಸ್ಥಗಿತಗೊಂಡಿದೆ.
ಗ್ರಾಮೀಣ ಭಾಗದಲ್ಲಿ ಟಿವಿ, ಮೊಬೈಲ್ ಇಲ್ಲದೇ ಇರುವ ಸಂದರ್ಭದಲ್ಲಿ ಧಾರಾವಾಹಿ, ಕತೆ, ಕವನ ಸೇರಿದಂತೆ ಸಮಗ್ರ ಓದಿಗೆ ಮಂಗಳ ಪತ್ರಿಕೆ ಬಹುತೇಕ ಮನೆಗಳಿಗೆ ಬರುತ್ತಿತ್ತು. ಈ ಕತೆಗಳು ಕಾರ್ಯಕ್ರಮಗಳ ಸಂದರ್ಭ ಚರ್ಚೆಯೂ ಆಗುತ್ತಿತ್ತು. ಗ್ರಾಮೀಣ ಭಾಗದ ಓದುಗರಿಗೆ ಅಂದು ಮಂಗಳ ವಾರದ ಖಾಯಂ ಪುಸ್ತಕ. ಅನೇಕ ಓದುಗರನ್ನು ಮಂಗಳ ಸೃಷ್ಟಿ ಮಾಡಿತ್ತು. ಇದರ ಮಕ್ಕಳ ಸಂಚಿಕೆ ‘ಬಾಲಮಂಗಳ’ ಕಣ್ಮುಚ್ಚಿ ವರ್ಷಗಳೇ ಆದವು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದಕ್ಕೆ ಅತ್ಯಧಿಕ ಪ್ರಸರಣ ಇತ್ತು. ದಕ್ಷಿಣ ಕನ್ನಡವಷ್ಟೇ ಅಲ್ಲ, ರಾಜ್ಯದಾದ್ಯಂತ ಹಲವು ಕವಿಗಳು, ಲೇಖಕರು, ಕತೆಗಾರರನ್ನು ಬೆಳಕಿಗೆ ತಂದ ಕೀರ್ತಿ ಈ ವಾರಪತ್ರಿಕೆಗೆ ಸಲ್ಲುತ್ತದೆ.