ಮಂಗಳೂರು: ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ರಾಜ್ಯ ಸರಕಾರದ ಮಾರ್ಗಸೂಚಿಯನ್ನು ಜಾರಿ ಮಾಡಬೇಕೆ ಹೊರತು ಪ್ರತ್ಯೇಕ ನಿಯಮಗಳನ್ನು ತಂದು ಜನರನ್ನು ಗೊಂದಲಕ್ಕೆ ದೂಡಬೇಡಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಜಿಲ್ಲಾಡಳಿತಕ್ಕೆ ಸಲಹೆ ಮಾಡಿದ್ದಾರೆ.
ಕೊರೋನಾ ಜನರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಜನರು ಈಗಾಗಲೇ ಮಾನಸಿಕ ಸ್ಥಿಮಿತದಲ್ಲಿದ್ದು, ನಮ್ಮ ಜಿಲ್ಲೆಗೆ ಪ್ರತ್ಯೇಕ ನಿಯಮಗಳನ್ನು ಮಾಡುವುದರಿಂದ ಜನರಿಗೆ ಇನ್ನಷ್ಟು ತೊಂದರೆಯಾಗುತ್ತದೆ. ಖರೀದಿಗೆ ಕಡಿಮೆ ಸಮಯ ನೀಡಿದರೆ ಮಾರ್ಕೆಟ್, ಅಂಗಡಿಗಳಲ್ಲಿ ಜನಜಂಗುಲಿ ಸೇರುವುದು ಒಳ್ಳೆಯದಲ್ಲ ಎಂದು ಮಾಜಿ ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಲಾಕ್ ಡೌನ್ ಹೇರುವ ಮುನ್ನ ಮೂರು ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಸರಕಾರ ನೀಡಿರುವ ಮಾರ್ಗಸೂಚಿಯನ್ನು ಯಥಾವತ್ ಜಾರಿ ಮಾಡಿ, ಮೀನು ಮಾರಾಟಗಾರರಿಗೆ ಕೋವಿಡ್ ನಿಯಂತ್ರಣ ಸೂತ್ರಗಳನ್ನು ಅನುಸರಿಸಿ ಮಾರಾಟ ಮಾಡಲು ಅವಕಾಶ ನೀಡಿ ಎಂದು ಮಾಜಿ ಸಚಿವ ರಮಾನಾಥ ರೈ ಸೂಚಿಸಿದ್ದಾರೆ.
ಕೋವಿಡ್ 19 ವಿರುದ್ಧ ಹೋರಾಡುವಾಗ ಜಿಲ್ಲೆಯ ಮುಖಂಡರು, ತಜ್ಞರು, ಸೇವಾ ಸಂಸ್ಥೆಗಳನ್ನು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟಿತ ಪ್ರಯತ್ನ ಮಾಡಿದಾಗ ಕೊರೋನಾ ಸೋಂಕನ್ನು ಸೋಲಿಸಲು ಸುಲಭ ಆಗಬಹುದು ಎಂದು ಮಾಜಿ ಸಚಿವರು ಜಿಲ್ಲಾಡಳಿತಕ್ಕೆ ಕಿವಿಮಾತು ಹೇಳಿದ್ದಾರೆ.