ಮಂಗಳೂರು: ಕೊರೊನಾ ನಿಯಂತ್ರಣ, ನಿರ್ವಹಣೆ ಮತ್ತು ನಿರ್ಮೂಲನೆಯ ಕಾರ್ಯಾಚರಣೆಯಲ್ಲಿ ಸರ್ಕಾರಿ ಸಂಸ್ಥೆಗಳ ಜತೆ ಕಾರ್ಯ ನಿರ್ವಹಿಸಲು ದಕ್ಷಿಣ ಕನ್ನಡ ಜಿಲ್ಲೆಯ ಸ್ವಯಂ ಸೇವಾ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಸಂಕಲ್ಪ ಮಾಡಿವೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಅವರ ಅಧ್ಯಕ್ಷತೆಯಲ್ಲಿ, ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಕೆ. ಆನಂದ್ ಕುಮಾರ್ ಮುಂದಾಳತ್ವದಲ್ಲಿ ಜನ ಶಿಕ್ಷಣ ಟ್ರಸ್ಟ್ ಸಹಯೋಗದೊಂದಿಗೆ ಕೋವಿಡ್ ತಡೆ ಲಸಿಕಾ ಅಭಿಯಾನದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರದ ಕುರಿತು ಜಿಲ್ಲೆಯ ಆಯ್ದ ಸರ್ಕಾರೇತರ ಸಂಸ್ಥೆಗಳ ಜೊತೆ ಶುಕ್ರವಾರ ನಡೆದ ಆನ್ಲೈನ್ ಸಭೆಯಲ್ಲಿ ಈ ನಿರ್ಧಾರ ಮಾಡಲಾಯಿತು.
ಕೋವಿಡ್ ನಿಯಂತ್ರಣ ಮತ್ತು ನಿರ್ವಹಣಾ ಕಾರ್ಯದಲ್ಲಿ ಜಿಲ್ಲೆಯ ಸರ್ಕಾರೇತರ ಸಂಸ್ಥೆಗಳು ಈಗಾಗಲೇ ಮಾಡುತ್ತಿರುವ ಮಹತ್ತರ ಕಾರ್ಯಗಳನ್ನು ಶ್ಲಾಘಿಸಿದ ಡಾ. ಕುಮಾರ್, ಕೋವಿಡ್ ಆರೈಕೆ ಕೇಂದ್ರಗಳ ಸಮರ್ಪಕ ನಿರ್ವಹಣೆ ಮತ್ತು ಅಸುರಕ್ಷಿತ ವರ್ಗದ ಎಲ್ಲ ಅರ್ಹ ಫಲಾನುಭವಿಗಳನ್ನು ಲಸಿಕಾಕರಣಕ್ಕೆ ನೋಂದಾಯಿಸಲು ಗ್ರಾಮ ಪಂಚಾಯಿತಿ ಮತ್ತು ಕಾರ್ಯಪಡೆಗಳೊಂದಿಗೆ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್, ನಿಟ್ಟೆ ವಿಶೇಷ ಮಕ್ಕಳ ಆರೈಕೆ ಕೇಂದ್ರದ ಡಾ. ಅಮರಶ್ರೀ, ಪ್ರಜ್ಞಾ ಕೌನ್ಸೆಲಿಂಗ್ ಪ್ರೊ. ಹಿಲ್ಡಾ ರಾಯಪ್ಪನ್, ದಿಶಾ ಟ್ರಸ್ಟ್ನ ಐರಿನ್ ವೇಗಸ್, ಪಡಿ ಸಂಸ್ಥೆಯ ರೆನ್ನಿ ಡಿಸೋಜ, ಸಂಸಾರ ತಂಡದ ಮೌನೇಶ್ ವಿಶ್ವಕರ್ಮ, ಇಂಚರದ ಪ್ರೀತಂ ತಮ್ಮ ಸಂಸ್ಥೆಗಳ ವತಿಯಿಂದ ಕೋವಿಡ್ ತಡೆಗೆ ಮಾಡುತ್ತಿರುವ ಜಾಗೃತಿ ಕಾರ್ಯಗಳು, ನೀಡುತ್ತಿರುವ ಬೆಂಬಲ ಸೇವೆಗಳು ಮತ್ತು ಲಸಿಕಾ ಅಭಿಯಾನದ ಯಶಸ್ವಿ ನಿರ್ವಹಣೆಗೆ ರೂಪಿಸಿಕೊಂಡಿರುವ ಕಾರ್ಯಯೋಜನೆಗಳ ಕುರಿತು ಮಾಹಿತಿ ನೀಡಿದರು.
ಕೆ. ಆನಂದ ಕುಮಾರ್, ನೋಡಲ್ ಸಂಸ್ಥೆ ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೇಸ್ವಾಮಿ ಮಾಹಿತಿ ನೀಡಿದರು. ಕೃಷ್ಣ ಮೂಲ್ಯ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ಸಂಯೋಜಕ ಪ್ರಸನ್ನ ಕುಮಾರ್ ಸಹಕರಿಸಿದರು. ಜಿಲ್ಲೆಗೆ ನಿಯಮಿತವಾಗಿ ಕೋವ್ಯಾಕ್ಸಿನ್ ಸರಬರಾಜು ಆಗುತ್ತಿದ್ದು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಆಯ್ದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿತರಿಸಲಾಗಿದೆ.
ಸಂದೇಶ ಸಿಕ್ಕಿದ ಫಲಾನುಭವಿಗಳು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಪಡೀಲ್, ಬಿಜೈ, ಜೆಪ್ಪು, ಸುರತ್ಕಲ್, ಕುಳಾಯಿ, ಕುಂಜತ್ತಬೈಲ್ಗಳಲ್ಲಿ ಹಾಗೂ ದೂರವಾಣಿ ಮೂಲಕ ಕರೆ ಮಾಡಿದ ಫಲಾನುಭವಿಗಳು ಹಾಗೂ ತಾಲ್ಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ಪ್ರಥಮ ಡೋಸ್ ಪಡೆದುಕೊಂಡ ಫಲಾನುಭವಿಗಳು 2ನೇ ಡೋಸ್ ಪಡೆಯಲು ಅರ್ಹರಿದ್ದಲ್ಲಿ ತಮ್ಮ ಹತ್ತಿರದ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಿ ಲಸಿಕೆಯನ್ನು ಪಡೆಯಬಹುದಾಗಿದೆ ಎಂದು ಡಿಎಚ್ಒ ಡಾ.ಕಿಶೋರ್ಕುಮಾರ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಸೂಚಿಸಿರುವುದರಿಂದ ಜಿಲ್ಲೆಯಲ್ಲಿ ವಾಸಿಸುತ್ತಿರುವ 18 ವರ್ಷ ಮೇಲಿನ ಅಂಗವಿಕಲರು ಹಾಗೂ 60 ವರ್ಷ ಮೇಲಿನ ಹಿರಿಯ ನಾಗರಿಕರು ಕೋವಿಡ್-19 ಲಸಿಕೆಯನ್ನು ನೀಡಲಾಗುತ್ತಿದೆ. ಲಸಿಕೆ ಪಡೆಯಲು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗೆ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ (0824-2421190, 2443990 ಮತ್ತು 1090), ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ (0824-2458173) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.