ಮಂಗಳೂರು, ನ.30: ಮೀನು ಹಿಡಿಯಲು ಬಲೆ ಹಾಕುತ್ತಿದ್ದಾಗ ತಮ್ಮದೇ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಯುವಕನೊಬ್ಬ ಪ್ರಾಣ ಕಳೆದುಕೊಂಡ ದುರಂತ ಘಟನೆ ಬೈಕಂಪಾಡಿ ಬಳಿ ಸಮುದ್ರದಲ್ಲಿ ಸಂಭವಿಸಿದೆ.
ಬೈಕಂಪಾಡಿಯ ಹೊಸಹಿತ್ಲು ನಿವಾಸಿ ನವೀನ್ ಕರ್ಕೇರ (32) ಮೃತರು. ಸಮುದ್ರ ದಡದಲ್ಲಿ ದೋಣಿಯಲ್ಲಿ ಪ್ರಯಾಣಿಸುತ್ತಾ ಮೀನಿಗೆ ಬಲೆ ಹಾಕುತ್ತಿದ್ದರು. ಈ ಸಂದರ್ಭದಲ್ಲಿ ಬಲೆಗೆ ನವೀನ್ ಕಾಲು ಸಿಲುಕಿದ್ದು ಅಲೆಗಳ ಹೊಡೆತಕ್ಕೆ ನೀರಿಗೆ ಬಿದ್ದು ಮುಳುಗಿದ್ದಾರೆ. ನವೀನ್ ನುರಿತ ಈಜುಗಾರರಾಗಿದ್ದರೂ ಬಲೆಯಲ್ಲಿ ಕಾಲು ಸಿಕ್ಕಿದ್ದರಿಂದ, ನೀರಿನಲ್ಲಿ ಈಜಿ ದಡ ಸೇರಲು ಸಾಧ್ಯವಾಗಲಿಲ್ಲ.
ಕೂಡಲೇ ಮತ್ತೊಂದು ದೋಣಿಯಲ್ಲಿದ್ದ ಮೀನುಗಾರರು ಗಮನಿಸಿ, ಅವರನ್ನು ಕರೆತಂದು ಆಸ್ಪತ್ರೆಗೆ ದಾಖಲಿಸಿದರು. ಆದರೆ ಅವರು ಅಷ್ಟರಲ್ಲೇ ಸಾವನ್ನಪ್ಪಿದ್ದರು ಎಂದು ವೈದ್ಯರು ತಿಳಿಸಿದರು.
ನವೀನ್ ಅವಿವಾಹಿತರಾಗಿದ್ದು ಕುಟುಂಬದಲ್ಲಿ ನಾಲ್ಕನೇ ಮಗನಾಗಿದ್ದ. ವಿಚಿತ್ರ ಅಂದರೆ, ಎಲ್ಲ ಸೋದರರೂ ಇದೇ ರೀತಿ ದುರಂತದಲ್ಲಿ ಮೃತಪಟ್ಟಿದ್ದರು. ತಂದೆ ಹಿಂದೆಯೇ ಮೃತರಾಗಿದ್ದು ಮೂವರು ಸೋದರರ ಪೈಕಿ, ಓರ್ವ ಮಡಿಕೇರಿಯಲ್ಲಿ ಅಪಘಾತಕ್ಕೀಡಾಗಿದ್ದರು. ಇನ್ನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮತ್ತೊಬ್ಬ ಅನಾರೋಗ್ಯದಿಂದ ಮೃತಪಟ್ಟಿದ್ದರು. ಈಗ ನವೀನ್ ಸಾವಿನೊಂದಿಗೆ ವಯಸ್ಸಾದ ತಾಯಿ ಒಬ್ಬಂಟಿಯಾಗಿದ್ದಾರೆ.