ಮಂಗಳೂರು: ತನ್ನ ಪರಿಚಯದ ವ್ಯಕ್ತಿಯೋರ್ವ ಪಿಸ್ತೂಲ್ ತೋರಿಸಿ ಕಾರು ಮತ್ತು ಮೊಬೈಲ್ಗಳನ್ನು ಸುಲಿಗೆ ಮಾಡಿದ ಘಟನೆ ನಡೆದಿದೆ. ಈ ಬಗ್ಗೆ ಕೆ. ಮುಜೀಬ್ ಸೈಯದ್ ಮಂಗಳೂರು ದಕ್ಷಿಣ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಮುಜೀಬ್ ಸೈಯದ್ ಮೇ 12ರಂದು ಬೆಳಗ್ಗೆ 10 ಗಂಟೆಗೆ ಮಗಳೊಂದಿಗೆ ಕಾರಿನಲ್ಲಿ ಕೊಡಿಯಾಲ್ಬೈಲ್ನಲ್ಲಿರುವ ಕ್ಲಿನಿಕ್ಗೆ ಹೋಗಿ ಬಳಿಕ ಅತ್ತಾವರದ ಅಪಾರ್ಟ್ಮೆಂಟ್ ಬಳಿ ತಿಂಡಿ ಖರೀದಿಸಿ ಕಾರಿನ ಬಳಿಗೆ ಬಂದಾಗ ಕಾರಿನ ಹಿಂದೆ ಇನ್ನೊಂದು ಕಾರು ನಿಂತಿತ್ತು.
ಅವರ ಪರಿಚಯದ ನೌಫಾಲ್ ಎಂಬಾತ ಅದರಿಂದ ಇಳಿದು ಮುಜೀಬ್ ಸೈಯದ್ ಅವರ ಬಳಿಗೆ ಬಂದು ಅವರನ್ನು ತಡೆದು ನಿಲ್ಲಿಸಿ “ನಿಮ್ಮಲ್ಲಿ ಮಾತನಾಡಲು ಇದೆ. ಕಾರನ್ನು ಫಾಲೋ ಮಾಡಿ’ ಎಂದ. ಅದರಂತೆ ಮುಜೀಬ್ ಸೈಯದ್ ಅವರು ಕಾರನ್ನು ಫಾಲೋ ಮಾಡಿಕೊಂಡು ಹೋಗುತ್ತಾ ಎಸ್.ಎಲ್. ಮಥಾಯಿಸ್ ರಸ್ತೆಯಲ್ಲಿರುವ ಪಾರ್ಕ್ ತಲುಪಿದಾಗ ನೌಫಾಲ್ ಆತನ ಕಾರನ್ನು ನಿಲ್ಲಿಸಿ ಮುಜೀಬ್ ಸೈಯದ್ ಅವರ ಕಾರಿನ ಡ್ರೈವಿಂಗ್ ಸೀಟಿನಲ್ಲಿ ಕುಳಿತು ಅವರನ್ನು ಪಕ್ಕದ ಸೀಟ್ನಲ್ಲಿ ಕುಳ್ಳಿರಿಸಿ ಆತ ಡ್ರೈವ್ ಮಾಡಿದ. ಕಾರಿನಲ್ಲಿ ಹೋಗುತ್ತಾ “ನೀನು ದುಬಾೖಯಲ್ಲಿ ತುಂಬಾ ಹಣ ಸಂಪಾದನೆ ಮಾಡುತ್ತಿದ್ದಿ. ನನಗೆ 5 ಲಕ್ಷ ರೂ. ಹಾಗೂ ಒಂದು ಕಾರನ್ನು ನೀಡಬೇಕು’ ಎಂದು ಒತ್ತಾಯಿಸಿದ್ದ. ಅದಕ್ಕೆ ಮುಜೀಬ್ ನಿರಾಕರಿಸಿದಾಗ ನೌಫಾಲ್ ಆತನ ಬಳಿ ಇದ್ದ ಪಿಸ್ತೂಲ್ ತೆಗೆದು ಹೆದರಿಸಿ ಒತ್ತಾಯದಿಂದ ಮುಜೀಬ್ ಮತ್ತು ಅವರ ಮಗಳ ಬಳಿ ಇದ್ದ ಮೊಬೈಲ್ ಫೋನ್ಗಳನ್ನು ಹಾಗೂ 18,000 ರೂ. ನಗದು ಹಣವನ್ನು ಬಲಾತ್ಕಾರದಿಂದ ಕಿತ್ತುಕೊಂಡು ಪುಚ್ಚ ಎಂಬಾತನ ಜತೆ ವಿವಿಧ ಕಡೆ ಸುತ್ತಾಡಿಸಿದ್ದ.
ಬಳಿಕ ಫ್ಲ್ಯಾಟ್ ಬಳಿಗೆ ಬಂದು ಮುಜೀಬ್ ಅವರ ಪತ್ನಿ ಮಕ್ಕಳನ್ನು ಬಳಿಗೆ ಕರೆದು ಅವರನ್ನು ಕೂಡ ಕಾರಿನಲ್ಲಿ ಕುಳ್ಳಿರಿಸುವಂತೆ ಒತ್ತಾಯಿಸಿದ್ದ. ಅದಕ್ಕೆ ಅವರು ನಿರಾಕರಿಸಿದ್ದರು. ಮುಜೀಬ್ ಕೂಡಲೇ ಕಾರಿನಿಂದ ಇಳಿದು ಮಗಳನ್ನು ಕೂಡ ಕೆಳಗೆ ಇಳಿಸಿದ್ದರು. ಅನಂತರ ನೌಫಾಲ್ ಕೂಡಲೇ ಮುಜೀಬ್ ಅವರ ಕಾರಿನೊಂದಿಗೆ ಹಾಗೂ ಪುಚ್ಚ ಎಂಬಾತ ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಆರೋಪಿಗಳು ಅಂದಾಜು ಒಟ್ಟು 6.58 ಲ.ರೂ. ಮೌಲ್ಯದ ಸೊತ್ತುಗಳನ್ನು ಸುಲಿಗೆ ಮಾಡಿಕೊಂಡು ಹೋಗಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.