ಮಂಗಳೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು. ನೀರ ನಡುವೆ, ಅಬ್ಬಕ್ಕ ಕ್ವೀನ್ ಕ್ರೂಸ್ನಲ್ಲಿ ಸುಂದರ ವಾತಾವರಣದಲ್ಲಿ ವಿನೂತನವಾಗಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು.


ಸದಾ ವೈವಿಧ್ಯಮಯ ಕಾರ್ಯಕ್ರಮಗಳನ್ನು ವಿನೂತನವಾಗಿ ಆಯೋಜಿಸಿಕೊಂಡು ಬರುತ್ತಿರುವ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ನ ದ.ಕ. ಜಿಲ್ಲಾ ಸಮಿತಿಯು ಈ ಬಾರಿ ವಿನೂತನವಾಗಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಆಚರಿಸಿತು. ಮಂಗಳೂರಿನ ಜಲ ಪ್ರವಾಸೋದ್ಯಮಕ್ಕೊಂದು ಹೊಸ ಭಾಷ್ಯವನ್ನು ಬರೆಯುತ್ತಿರುವ ಅಬ್ಬಕ್ಕ ಕ್ವೀನ್ ಕ್ರೂಸ್ನಲ್ಲಿ ವಿನೂತನವಾಗಿ ಕಾರ್ಯಕ್ರಮ ನಡೆಯಿತು. ಜೊತೆಗೆ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.


ಕಾರ್ಯಕ್ರಮವನ್ನು ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಎಲ್ಲರ ಸಹಭಾಗಿತ್ವದೊಂದಿಗೆ ಜರ್ನಲಿಸ್ಟ್ ಯೂನಿಯನ್ನ ಪ್ರಸ್ತಾವನೆಗಳಿಗೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಜರ್ನಲಿಸಂನಲ್ಲಿ ಕಟ್ ಆಂಡ್ ಪೇಸ್ಟ್ ಜರ್ನಲಿಸಂ ಸರಿಯಲ್ಲ. ತನಿಖಾ ಪತ್ರಿಕೋದ್ಯಮ, ವಸ್ತುನಿಷ್ಠ ವರದಿಯನ್ನು ಮಾಡುವುದು ಬಹಳ ಮುಖ್ಯ ಮಂದಿನ ಸವಾಲಿನ ದಿನಗಳಲ್ಲಿ ವಸ್ತುನಿಷ್ಠ ವರದಿಯು ಬಹಳ ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು, ಪತ್ರಕರ್ತರು ಎಂದರೆ ಸತ್ಯವನ್ನು ಸಮಾಜಕ್ಕೆ ತೋರಿಸುವವರು. ಸಮಾಜದಲ್ಲಿ ಆಗುವ ತಪ್ಪುಗಳನ್ನು ಸರಿಪಡಿಸುವಂತಹವರು ಪತ್ರಕರ್ತರು. ಕೆಲವೊಂದು ಗೊತ್ತಿಲ್ಲದೆ ತಪ್ಪುಗಳಾದ ಸಂದರ್ಭದಲ್ಲಿ ಎಚ್ಚರಿಸಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಹೇಳಿದರು.

ಈ ವೇಳೆ ಹಿರಿಯ ಪತ್ರಕರ್ತರಾದ ರಿಚರ್ಡ್ ಲಸ್ರಾದೋ, ಜನಾರ್ಧನ ಎಸ್. ಪುರಿಯ, ಆರ್.ಎನ್. ಪೂವಣಿ ಉಜಿರೆ, ರಾಜಾ ಬಂಟ್ವಾಳ್, ಹಮೀದ್ ವಿಟ್ಲ, ಜಯಪ್ರಕಾಶ್ ಕುಕ್ಕೇಟಿ, ಯು.ಎಲ್. ಉದಯಕುಮಾರ್ ಮತ್ತು ನ್ಯೂಸ್ನ ಆಡಳಿತ ನಿರ್ದೇಶಕರಾದ ಲಕ್ಷ್ಮಣ್ ಕುಂದರ್ ಅವರನ್ನು ಜಿಲ್ಲಾಧಿಕಾರಿ, ಶಾಸಕರು ಸಹಿತ ಅತಿಥಿಗಳು ಶಾಲು, ಹಾರ ಹೊದೆಸಿ, ಫಲಪುಷ್ಪ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ನ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಹರೀಶ್ ಬಂಟ್ವಾಳ್ ಅವರು ಸಮಿತಿಯು ಬೆಳೆದುಬಂದ ಹಾದಿಯ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ನ ಅಧ್ಯಕ್ಷರಾದ ಬಿ. ನಾರಾಯಣ, ಕೆಜೆಯು ಬೆಂಗಳೂರು ಗೌರವಾಧ್ಯಕ್ಷ ಕೆ.ವಿ. ರಾಜೇಂದ್ರ ಕುಮಾರ್, ಪ್ರಧಾನ ಕಾರ್ಯದರ್ಶಿ ನರೇಂದ್ರನಾಥ್, ಕಾರ್ಯದರ್ಶಿ ರಾಘವೇಂದ್ರ ಕೆಸವಳಲು, ಉಪಾಧ್ಯಕ್ಷ ಈ.ಟಿ.ಕೇರ್ ರಾಜು, ಕೆಜೆಯು ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಜಯಕುಮಾರ್ ಕೆ., ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ. ಜಿಲ್ಲಾ ಸಮಿತಿಯ ಕೋಶಾಧಿಕಾರಿ ಜ್ಯೋತಿಪ್ರಕಾಶ್ ಪುಣಚ, ಜೊತೆ ಕಾರ್ಯದರ್ಶಿ ಈಶ್ವರ ವಾರಣಾಸಿ, ಉಪಾಧ್ಯಕ್ಷ ಗಿರಿಧರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಕೆನ್ಯೂಟ್ ಪಿಂಟೋ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೆಜೆಯು ದ.ಕ. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರ ನಿರ್ವಹಣೆಯಲ್ಲಿ ಕಾರ್ಯಕ್ರಮವು ಮೂಡಿಬಂತು.

ಬಳಿಕ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಡಾ. ಚಂದ್ರ ಪೂಜಾರಿ ಅವರಿಂದ ಅಭಿವ್ಯಕ್ತಿ ಸ್ವಾತಂತ್ರ್ಯ-ತತ್ವ ಮತ್ತು ಆಚರಣೆ ಎನ್ನುವ ವಿಚಾರದ ಬಗ್ಗೆ ವಿಶೇಷ ಉಪನ್ಯಾಸ ನಡೆಯಿತು. ಈ ಮೂಲಕ ಅಬ್ಬಕ್ಕ ಕ್ವೀನ್ ಕ್ರೂಸ್ ಮೂಲಕ ಮಂಗಳೂರಿನ ಬೊಕ್ಕಪಟ್ಣದಿಂದ ಆರಂಭಿಸಿ ನದಿ-ಕಡಲ ನೀರ ನಡುವಿನ ವಿಹಂಗಮ ವಿಹಾರದ ಜೊತೆಗೆ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯು ಸಂಪನ್ನಗೊಂಡಿತು.











