ಮಂಗಳೂರು: ಬಿಗ್ ಬಾಸ್ ಸ್ಪರ್ಧಿಯೊಬ್ಬರು ಹುಲಿ ಉಗುರಿನ ಪೆಂಡೆಂಟ್ ಹಾಕಿಕೊಂಡು ಅರೆಸ್ಟ್ ಆದ ಬಳಿಕ ಇದೀಗ ಅರಣ್ಯ ಸಂರಕ್ಷಣಾ ಕಾಯಿದೆಯ ಬಗ್ಗೆ ಜನರಿಗೆ ಕುತೂಹಲ ಮೂಡಲಾರಂಭಿಸಿದೆ. ಈ ಬಗ್ಗೆ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಕೂಡ ಜನರಿಗೆ ಅರಣ್ಯ ಕಾಯಿದೆ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ ಎಂದು ಹೇಳಿದ್ದಾರೆ. ಈ ನಡುವೆ ಹುಲಿ ಉಗುರು ಅಲ್ಲದೆ ಮನೆಯಲ್ಲಿ ನವಿಲು ಗರಿ ಇಟ್ಟುಕೊಳ್ಳುವುದು ಕೂಡ ಅರಣ್ಯ ಸಂರಕ್ಷಣಾ ಕಾಯಿದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.
ಹಾಗೆಯೇ ವನ್ಯಜೀವಿ ನವಿಲು ಸಾಕುವುದೂ ಅಪರಾಧ. ನವಿಲಿನ ಗರಿಯನ್ನೂ ಇಟ್ಟುಕೊಳ್ಳುವಂತಿಲ್ಲ. ಅರಣ್ಯದಂಚಿನ ಗ್ರಾಮದಲ್ಲಿದ್ದು, ನವಿಲು ಜನರ ಮನೆಯ ಆವರಣಕ್ಕೆ ಸ್ವ ಇಚ್ಛೆಯಿಂದ ಬಂದರೆ ಅಡ್ಡಿಯಿಲ್ಲ. ಆದರೆ, ಅದನ್ನು ಜನ ಸಾಕುವಂತಿಲ್ಲ . 1972ರ ವನ್ಯಜೀವಿ ಕಾಯ್ದೆ ವನ್ಯಜೀವಿ ವಸ್ತುಗಳ ಸಂಗ್ರಹ, ಪ್ರದರ್ಶನ ನಿಷೇಧಿಸಿತು. ಬಳಿಕ, 2006, 2012 ಹಾಗೂ 2022ರ ವನ್ಯಜೀವಿ ಕಾಯ್ದೆ ಇನ್ನಷ್ಟು ಬಲಿಷ್ಠವಾಗಿವೆ.
ಇದೀಗ ವನ್ಯಜೀವಿಗಳ ಸಂರಕ್ಷಣಾ ಕಾಯಿದೆ 1972ರ ಪ್ರಕಾರ ವನ್ಯಜೀವಿಗಳ ಅಂಗಾಂಗ, ಅವಶೇಷಗಳ ಮಾರಾಟ ಅಥವಾ ಬಳಕೆಗೆ ಸಂಪೂರ್ಣ ನಿಷೇಧವಿದೆ. ಯಾವುದೇ ಜೀವಿಯನ್ನು ಜೀವಂತವಾಗಿ ಅಥವಾ ಮೃತಪಟ್ಟ ಬಳಿಕ ಮಾರಾಟ ಮಾಡುವಂತಿಲ್ಲ. ಕಾಡು ಪ್ರಾಣಿಗಳ ಚರ್ಮವನ್ನು ಹದ ಮಾಡಿ ಅಲಂಕಾರಿಕ ವಸ್ತುಗಳಾಗಿ ಬಳಸುವಂತಿಲ್ಲ. ವನ್ಯಜೀವಿಗಳ ಮಾಂಸ ಮಾರಾಟ ಹಾಗೂ ಭಕ್ಷಣೆ ಸಹ ಅಪರಾಧ. ಹಾವಿನ ವಿಷವನ್ನೂ ಸಂಗ್ರಹ ಮಾಡುವಂತಿಲ್ಲ. ನವಿಲು ಗರಿಗಳನ್ನೂ ಸಂಗ್ರಹಿಸುವಂತಿಲ್ಲ. ವನ್ಯಜೀವಿಗಳ ಕೂದಲು, ಚರ್ಮ, ಉಗುರು, ಗೊರಸು, ಹಲ್ಲು, ಆನೆ ದಂತ ಸೇರಿದಂತೆ ದೇಹದ ಯಾವುದೇ ಭಾಗವನ್ನು ಸಂಗ್ರಹಿಸುವುದು, ಸಾಗಿಸುವುದು, ಮಾರಾಟ ಮಾಡುವುದು ಹಾಗೂ ಬಳಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.