ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಆರೋಪಿ ಶಾರೀಕ್ ಸೇರಿದಂತೆ ನಾಲ್ವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಪುಟಗಳ ಚಾರ್ಜ್ಶೀಟ್ ಅನ್ನು ಇನ್ನೇನು ಕೆಲವೇ ದಿನಗಳಲ್ಲಿ ಸಲ್ಲಿಸಲಾಗುತ್ತಿದೆ. ಇದರಲ್ಲಿನ ಸ್ಫೋಟಕ ಅಂಶಗಳು ಇಲ್ಲಿವೆ.
ಪ್ರಮುಖ ಆರೋಪಿ ಶಾರಿಕ್, ಮಾಜ್ ಮುನೀರ್, ಯಾಸೀನ್, ಅರಾಫತ್ ಹೇಳಿಕೆಗಳನ್ನು ಎನ್ಐಎ ಅಧಿಕಾರಿಗಳು ಚಾರ್ಜ್ಶೀಟ್ನಲ್ಲಿ ದಾಖಲಿಸಿಕೊಂಡಿದ್ದಾರೆ. ಸ್ಫೋಟಕ್ಕೆ ಎಲ್ಲೆಲ್ಲಿ ಪ್ಲ್ಯಾನ್ ಮಾಡಲಾಗಿತ್ತು, ತರಬೇತಿ ಎಲ್ಲಿ ನಡೆಸಲಾಗಿತ್ತು? ಯಾರೆಲ್ಲಾ ಕೃತ್ಯದಲ್ಲಿ ಇದ್ದರು ಎಂಬುದರ ಬಗ್ಗೆ ಉಲ್ಲೇಖಿಸಲಾಗಿದೆ. ಸ್ಥಳ ಮಹಜರು ವೇಳೆ ಟ್ರೈನಿಂಗ್ ಪಡೆದಿದ್ದ ತುಂಗಾ ನದಿ ತೀರದ ಸ್ಥಳವನ್ನು ಶಾರೀಕ್ ಈಗಾಗಲೇ ತೋರಿಸಿದ್ದಾನೆ.
ಕದ್ರಿ ದೇವಸ್ಥಾನ ಸ್ಫೋಟಕ್ಕೆ ಎಲ್ಲೇಲ್ಲಿ ಪ್ಲ್ಯಾನಿಂಗ್ ಆಗಿತ್ತು, ತರಬೇತಿ ಎಲ್ಲಿ ನಡೆಸಲಾಗಿತ್ತು, ಯಾರೆಲ್ಲರು ಟೀಂನಲ್ಲಿ ಇದ್ದರು, ಕದ್ರಿ ದೇವಸ್ಥಾನ ಬ್ಲಾಸ್ಟ್ ಬಳಿಕ ಉಡುಪಿ ಕೃಷ್ಣಾಮಠ, ಚಿಕ್ಕಮಗಳೂರು ಬಿಜೆಪಿ ಕಚೇರಿ ಬ್ಲಾಸ್ಟ್ ಹೊಣೆಯೂ ಇದೇ ಶಾರಿಕ್ ವಹಿಸಿದ್ದ. ಇದರ ಜೊತೆಗೆ ಕೆಲ ಮಠಗಳನ್ನು ಟಾರ್ಗೆಟ್ ಮಾಡಿದ್ದು, ಅವುಗಳ ಬ್ಲ್ಯಾಸ್ಟ್ಗೂ ಸಂಚು ರೂಪಿಸಿದ್ದ ಬಗ್ಗೆಯೂ ಉಲ್ಲೇಖಿಸಲಾಗಿದೆ.
ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿದ್ದ ಶಾರೀಖ್, ಕದ್ರಿ ಮಂಜುನಾಥ ದೇವಸ್ಥಾನ, ಕುದ್ರೋಳಿ ದೇವಸ್ಥಾನ, ಕಟೀಲು ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಪಂಪ್ವೆಲ್ ಜಂಕ್ಷನ್ ನೋಡಿಕೊಂಡು ಬಂದಿದ್ದ. ಮಧ್ಯಾಹ್ನದ ಬಳಿಕ ಶ್ರೀಕ್ಷೇತ್ರ ಧರ್ಮಸ್ಥಳಕ್ಕೂ ಹೋಗಿದ್ದು, ಬಿ.ಸಿ ರೋಡ್ನಿಂದ ಬಸ್ನಲ್ಲಿ ಧರ್ಮಸ್ಥಳಕ್ಕೆ ಬಂದಿಳಿದಿದ್ದ ಎನ್ನಲಾಗಿದೆ.
ಅರ್ಧ ದಿನ ಧರ್ಮಸ್ಥಳದಲ್ಲಿ ಓಡಾಡಿದ್ದ ಶಾರಿಖ್ ಸಂಜೆ ಆಗ್ತಿದ್ದಂತೆ ಚಿಕ್ಕಮಗಳೂರಿಗೆ ಹೋಗಿದ್ದ. ಚಿಕ್ಕಮಗಳೂರಿನ ಎಂಜಿ ರೆಸಿಡೆನ್ಸಿಯಲ್ಲಿ ರೂಮ್ ಪಡೆದು ರಾತ್ರಿ ತಂಗಿದ್ದ ಈತ ಸೆಪ್ಟೆಂಬರ್ 11ರಂದು ಅಲ್ಲಿರುವ ದೇವೀರಮ್ಮ ಬೆಟ್ಟ ಮತ್ತು ಬಾಬಾ ಬುಡನ್ಗಿರಿಗೆ ಹೋಗಿ ಬಂದಿದ್ದ. ಅಲ್ಲಿಂದ ಮತ್ತೆ ಮೈಸೂರಿಗೆ ವಾಪಸ್ ಆಗಿದ್ದ ಎನ್ನಲಾಗಿದೆ. ಜೊತೆಗೆ, ಆರು ತಿಂಗಳ ಕಾಲ ನಿರಂತರವಾಗಿ ತರಬೇತಿ ಪಡೆದ ಬಗ್ಗೆಯೂ ಮಾಹಿತಿ ಇದರಲ್ಲಿದೆ.
ಅಲ್ಲದೆ, ವಿದೇಶಿ ಹ್ಯಾಂಡ್ಲರ್ಗಳ ಬಗ್ಗೆಯೂ ಸ್ಫೋಟಕ ವಿಚಾರಗಳನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ. ಸ್ಪೋಟಕಗಳನ್ನು ಖರೀದಿಗೆ ವಿದೇಶದಿಂದ ಹಣ ಸಾಕಷ್ಟು ಹಣ ಬರುತ್ತಿತ್ತು. ಇದೇ ಹಣದಿಂದ ಆರೋಪಿಗಳು ಸ್ಫೋಟಕಕ್ಕೆ ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತಿದ್ದರು. ಜೊತೆಗೆ ಇವರ ಖರ್ಚು ವೆಚ್ಚಗಳನ್ನು ಹ್ಯಾಂಡ್ಲರ್ಗಳೇ ನೋಡಿಕೊಳ್ಳುತ್ತಿದ್ದರು ಎಂಬುದು ಉಲ್ಲೇಖವಾಗಿದೆ.
ವಿದೇಶದಿಂದ ಯಾವೆಲ್ಲ ಖಾತೆಗಳಿಂದ ಹಣ ಬಂದಿದೆ, ಯಾವ ಅಕೌಂಟ್ಗಳಿಗೆ ಬಂದಿದೆ ಎಂಬ ದಾಖಲೆಗಳ ಜೊತೆಗೆ ಭಟ್ಕಳ್ ಗ್ಯಾಂಗ್ ಮೀರಿಸುವಷ್ಟು ನೆಟ್ವರ್ಕ್ ಬೆಳೆಸಲು ಪ್ಲ್ಯಾನ್ ಹಾಕಿದ್ದರ ಬಗ್ಗೆಯೂ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಲಾಗಿದೆ.
ನವೆಂಬರ್ 19. 2022 ರಂದು ಮಂಗಳೂರಿನಲ್ಲಿ ಸ್ಫೋಟಗೊಂಡ ಬಾಂಬ್ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಮಂಗಳೂರಿನಲ್ಲಿ 2020 ರಲ್ಲಿ ಬರೆಯಲ್ಪಟ್ಟಿದ್ದ ಉಗ್ರ ಗೋಡೆ ಬರಹ ಪ್ರಕರಣದ ಆರೋಪಿಯಾಗಿದ್ದ ಮಹಮ್ಮದ್ ಶಾರೀಕ್ ತಂದ ಬಾಂಬ್ ಅವನ ಕಾಲ ಬುಡದಲ್ಲೇ ಸ್ಫೋಟಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಕರ್ನಾಟಕದಲ್ಲಿ ಐಸಿಸ್ ಮಾದರಿ ಕೃತ್ಯಕ್ಕೆ ಸಂಚು ರೂಪಗೊಂಡಿದ್ದು ಈ ಸ್ಫೋಟದಿಂದ ಬಯಲಾಗಿತ್ತು.
ಅಲ್ಲದೆ, ಶಿವಮೊಗ್ಗದಲ್ಲಿ ಶಂಕಿತ ಉಗ್ರ ಮಾಝ್ ಮುನೀರ್ ಅಹ್ಮದ್ ಬಂಧನವಾಗುತ್ತಿದ್ದಂತೆ ಶಾರೀಕ್ ಅಲ್ಲಿಂದ ಪರಾರಿಯಾಗಿ ಮಂಗಳೂರು, ಮೈಸೂರು, ಕೇರಳ, ತಮಿಳುನಾಡು ಸುತ್ತಾಡಿಕೊಂಡಿದ್ದ. ಹಿಂದೂ ವೇಶ ಧರಿಸಿ ಮೈಸೂರಿನಲ್ಲಿ ಬಾಡಿಗೆ ಮನೆ ಮಾಡಿ ಅಲ್ಲಿಂದ ತನ್ನ ಉಗ್ರ ಕೃತ್ಯ ಮುಂದುವರೆಸಿದ್ದ.