ಮರಳುನಾಡಿಗೆ ವಿದಾಯ ಹೇಳಿದ ಮಂಗಳೂರ ಪ್ರವಾಸಿ ಸಯ್ಯದ್ ಶಾಹುಲ್ ಹಮೀದ್

ಎಷ್ಟೋ ಮಂದಿ ಉದ್ಯೋಗ ಅರಸುತ್ತಾ ವಿದೇಶಕ್ಕೆ ಹೋಗುತ್ತಾರೆ. ಒಂದೇ ಕಡೆ ನಿಲ್ಲದೇ, ಸಮಾಧಾನಗೊಳ್ಳದೇ ಕೆಲಸ ಬದಲಿಸುತ್ತಾ ಊರೂರು, ದೇಶ-ದೇಶ ಅಲೆಯುತ್ತಾರೆ. ಆದರೆ ಇಲ್ಲೊಬ್ಬ ಸಹನಾಶೀಲ ವ್ಯಕ್ತಿ ನಿರಂತರ 45 ವರ್ಷಗಳ ಕಾಲ ಒಂದೇ ಕಂಪೆನಿಯಲ್ಲಿ ಕೆಲಸ ಮಾಡಿ ಇದೀಗ ನಿವೃತ್ತರಾಗಿ ಭಾನುವಾರ (10/09/23) ತಾಯ್ನಾಡು ಮಂಗಳೂರಿಗೆ ಮರಳಿದ್ದಾರೆ.
ಸಯ್ಯದ್ ಶಾಹುಲ್ ಹಮೀದ್..! ಮಂಗಳೂರು ಬಂದರಿನವರು. ಅಜಾನುಬಾಹು ವ್ಯಕ್ತಿತ್ವ. ವಿದ್ಯಾರ್ಥಿ ದೆಸೆಯಲ್ಲೇ ಸಮಾಜ ಹಿತದ ಕನಸು ಕಂಡವರು. ಸಂಘಟನಾತ್ಮಕವಾಗಿ ತೊಡಗಿಸಿಕೊಂಡವರು. ಡಿಗ್ರಿ ವಿದ್ಯೆ ಪಡೆದು ವಿದೇಶದ ಕನಸು ಹೊತ್ತು 1979 ರಲ್ಲಿ ವಿಮಾನ ಏರಿದ ಶಾಹುಲ್ ಹಮೀದ್ ಸುದೀರ್ಘ 45 ವರ್ಷ ಒಂದೇ ಕಡೆ ಕೆಲಸ ಮಾಡಿ ನಿಯ್ಯತ್ತು ತೋರಿದ್ದಾರೆ. ಸೌದಿ ಅರೇಬಿಯಾದ “ನಾಗಿ ಗ್ಫೂಪ್ ಆಫ್ ಕಂಪೆನಿ”ಯ ಸಹೋದರ ಸಂಸ್ಥೆ “ಅರೇಬ್ಯನ್ ಫುಡ್ ಸಪ್ಲೈ” ಯಲ್ಲಿ (ಎ.ಎಫ್.ಎಸ್.) 1979 ರಲ್ಲಿ ಸೇರಿದ ಅವರು ವಿವಿಧ ಹುದ್ದೆಗೆ ಭಡ್ತಿ ಹೊಂದಿ 2023ರಲ್ಲಿ ಅದೇ ಕಂಪೆನಿಯ ಫೈನಾನ್ಸ್ ಸೀನಿಯರ್ ಅಧಿಕಾರಿಯಾಗಿ ನಿವೃತ್ತರಾದರು. ಕಂಪೆನಿಯ ರಿಯಾದ್, ಜಿದ್ದಾ, ದಮಾಮ್, ಜುಬೈಲ್ ಘಟಕಗಳಲ್ಲಿ ಕೆಲಸ ಮಾಡಿ ಅಲ್ಲಿನ ಸಹೋದ್ಯೋಗಿಗಳ ಜೊತೆಗೆ ಉತ್ತಮ ಸಂಬಂಧ, ಬಾಂಧವ್ಯವನ್ನು ಬೆಳೆಸಿದ್ದಾರೆ.
ಇಷ್ಟು ಮಾತ್ರವಲ್ಲ, ಅವರು ತಾಯ್ನಾಡ ಶ್ರೇಯೋಭಿವೃದ್ಧಿಗಾಗಿ ನೀಡಿರುವ ಕೊಡುಗೆ ಸ್ಮರಣೀಯ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಕಾರ್ಯಾಚರಿಸುವ ಜಮೀಯ್ಯತುಲ್ ಫಲಾಹ್ ಸಂಸ್ಥೆಯಲ್ಲಿ ಕಳೆದ 34 ವರ್ಷಗಳಿಂದ ತೊಡಗಿಸಿಕೊಂಡಿರುವ ಶಾಹುಲ್ ಹಮೀದ್ ಸಂಸ್ಥೆಯ ದಮಾಮ್ ಘಟಕದ ಅಧ್ಯಕ್ಷರಾಗಿ, ಎನ್.ಆರ್.ಸಿ.ಸಿ. ಅಮೀರ್ ಆಗಿ ನಾಡಿನ ಶೈಕ್ಷಣಿಕ ಬೆಳವಣಿಗೆಗೆ ಅಪಾರ ಶ್ರಮವನ್ನು ದಾರೆ ಎರೆದವರು. ಕಳೆದ 28 ವರ್ಷದಿಂದ ಐ.ಎಂ.ಸಿ.ಸಿ. ಸಂಘಟನೆಯ ಸೌದಿಯ ಸ್ಥಾಪಕ ಸದಸ್ಯರಾಗಿ, ದಮಾಮ್ ಶಾಖೆಯ ಅಧ್ಯಕ್ಷರಾಗಿಯೂ ಶಾಹುಲ್ ಹಮೀದ್ ಕೆಲಸ ಮಾಡಿದ್ದಾರೆ. ಸೌದಿಯಲ್ಲಿ ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ, ಸಾಸ್ಕೃತಿಕ ಕ್ಷೇತ್ರದಲ್ಲಿ ಸಮರ್ಥವಾಗಿ ಗುರುತಿಸಿಕೊಂಡ ಸಯ್ಯದ್ ಶಾಹುಲ್ ಹಮೀದ್ ನಿವೃತ್ತರಾಗಿ ನಾಡಿಗೆ ಮರಳುವಾಗ ಸೌದಿಯ ಹಲವಾರು ಸಂಘ ಸಂಸ್ಥೆಗಳು ಅವರನ್ನು ಅಭಿನಂದಿಸಿ ಬೀಳ್ಕೊಟ್ಟಿವೆ. ತಾನು ಕೆಲಸ ಮಾಡಿದ ಕಂಪೆನಿಯನ್ನು ಅಭಿಮಾನದಿಂದ ನೆನೆಯುವ ಶಾಹುಲ್ ಹಮೀದ್ “ಅನ್ನ ಕೊಟ್ಟ ಸಂಸ್ಥೆಗೆ ಚಿರಋಣಿಯಾಗಿದ್ದೇನೆ. ಸೌದಿ ನನಗೆ ನೆಲೆ ಕಲ್ಪಿಸಿದೆ. ಉತ್ತಮ ಜೀವನ ನೀಡಿದೆ. ಕಂಪೆನಿಯ ಪ್ರೀತಿಗೆ ತಲೆ ಭಾಗುವೆನು” ಎಂದಿದ್ದಾರೆ.
37 ವರ್ಷಗಳ ಹಿಂದೆ ಮಂಗಳೂರಿನ ಆಯಿಷಾ ಅವರನ್ನು ಮದುವೆಯಾದ ಶಾಹುಲ್ ಹಮೀದ್ ಅವರಿಗೆ 2 ಹೆಣ್ಣು ಮತ್ತು ಒಂದು ಗಂಡು ಮಕ್ಕಳು. 45 ವರ್ಷಗಳ ಪ್ರವಾಸಿ ಜೀವನದಿಂದ ಊರಿಗೆ ಮರಳಿರುವ ಶಾಹುಲ್ ಹಮೀದ್ ಅವರಿಗೆ ನಿವೃತ್ತಿ ಜೀವನದಲ್ಲೂ ಸಮಾಜ ಸೇವೆಯ ಪ್ರವೃತ್ತಿ ಮುಂದುವರಿಸಬೇಕೆಂಬ ಅದಮ್ಯ ಬಯಕೆ ಇದೆ. ಬಂಟ್ವಾಳ ತಾಲೂಕು ಜಮೀಯ್ಯತುಲ್ ಫಲಾಹ್ ಸಂಸ್ಥೆಯು ಸೆಪ್ಟಂಬರ್ 11 ಸೋಮನಾರ ಬೆಳಿಗ್ಗೆ ತುಂಬೆ ಪದವಿಪೂರ್ವ ಕಾಲೇಜಿನಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ಕಾರ್ಯಕ್ರಮದಲ್ಲಿ ಶಾಹುಲ್ ಹಮೀದ್ ಅವರ ಸೇವೆಯನ್ನು ಗುರುತಿಸಿ ಗೌರವಿಸಲಿದೆ.
-ರಶೀದ್ ವಿಟ್ಲ.








