ಕಾಸರಗೋಡು: ಕಾರಿನಲ್ಲಿ ಬಂದ ತಂಡವೊಂದು ಯುವಕನನ್ನು ಅಪಹರಿಸಿದ ಘಟನೆ ಶುಕ್ರವಾರ ರಾತ್ರಿ ಮಜೀರ್ಪಳ್ಳದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಕಂಕನಾಡಿಯ ಅಬ್ದುಲ್ ಹಸೀಬ್ (28) ಮತ್ತು ಬಂಟ್ವಾಳದ ಯಾಹ್ಯಾ (32) ಪೋಲೀಸರ ವಶದಲ್ಲಿದ್ದು, ನಾಲ್ವರು ಪರಾರಿಯಾಗಿದ್ದಾರೆ.
ರಾತ್ರಿ ಕಾರಿನಲ್ಲಿ ಬಂದ ತಂಡವು ಮಜೀರ್ಪಳ್ಳ ಬಲಿಪಗುಳಿಯ ಸವಾದ್ (28) ಎಂಬ ಯುವಕನನ್ನು ಬಲವಂತವಾಗಿ ಅಪಹರಿಸಿ ಪರಾರಿಯಾಗಿದ್ದು, ಈ ಕಾರಿಗೆ ಬೆಂಗಾವಲಾಗಿ ಬಂದ ಇನ್ನೊಂದು, ಕಾರು ಮತ್ತು ಬೈಕ್ ಅನ್ನು ಸ್ಥಳೀಯರು ತಡೆದು ಇಬ್ಬರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಗಲ್ಫ್ ಉದ್ಯೋಗಿಯಾಗಿರುವ ಸವಾದ್ ತಿಂಗಳುಗಳ ಹಿಂದೆ ಊರಿಗೆ ಬಂದಿದ್ದರು. ಗಲ್ಫ್ನಲ್ಲಿದ್ದಾಗ ಬೆಂಗಳೂರು ಮೂಲದ ತಂಡವೊಂದರ ಜೊತೆ ಸವಾದ್ ಹಣದ ವ್ಯವಹಾರ ಮಾಡಿಕೊಂಡಿದ್ದು, ಈ ವಿಚಾರಕ್ಕಾಗಿ ಅಪಹರಣ ನಡೆದಿದೆ ಎನ್ನಲಾಗಿದೆ. ಸವಾದ್ ತಾಯಿ ಸೈನಬಾ ನೀಡಿದ ದೂರಿನಂತೆ ಪೊಲೀಸರು ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.