ನವದೆಹಲಿ: ಕಾರ್ಮಿಕರು, ರೈತರು ಮತ್ತು ಜನರ ಮೇಲೆ ಪರಿಣಾಮ ಬೀರುವ ಸರ್ಕಾರದ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ಮಾರ್ಚ್ 28 ಮತ್ತು 29 ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಬ್ಯಾಂಕಿಂಗ್ ವಲಯವೂ ಮುಷ್ಕರದಲ್ಲಿ ಪಾಲ್ಗೊಳ್ಳಲಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಫೇಸ್ಬುಕ್ನಲ್ಲಿ ತಿಳಿಸಿದೆ.
ಈ ನಡುವೆ ಹೆಚ್ಚಿದ ನಿರುದ್ಯೋಗ, ಕಡಿಮೆಯಾದ ವೇತನ, ಸಾರ್ವಜನಿಕ ವಲಯದ ಬ್ಯಾಂಕ್ಗಳ ಖಾಸಗೀಕರಣ ಮತ್ತು ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆ 2021 ಸೇರಿದಂತೆ ಇತರ ಸಮಸ್ಯೆಗಳ ವಿರುದ್ಧ ಪ್ರತಿಭಟಿಸಲು ಸಂಘಟನೆಯು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಸೇರಲಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ತಿಳಿಸಿದೆ.
ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ (ಬಿಇಎಫ್ಐ) ಮತ್ತು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ) ಸೇರಿದಂತೆ ಇತರ ಕೇಂದ್ರೀಯ ಒಕ್ಕೂಟಗಳು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇದೇ ರೀತಿಯ ಸೂಚನೆಯನ್ನು ನೀಡಿದೆ ಮತ್ತು ಬ್ಯಾಂಕ್ ಮುಷ್ಕರದ ಕಾರಣ ನೀಡಿ ಈ ದಿನಾಂಕಗಳಲ್ಲಿ ತನ್ನ ಸೇವೆಗಳಲ್ಲಿ ತೊಂದ್ರೆಯಾಗಲಿದೆ ಅಂತ ತಿಳಿಸಿದೆ.
ಬ್ಯಾಂಕ್ಗಳ ಹೊರತಾಗಿ ಕಲ್ಲಿದ್ದಲು, ಉಕ್ಕು, ತೈಲ, ಟೆಲಿಕಾಂ, ಅಂಚೆ, ಆದಾಯ ತೆರಿಗೆ, ತಾಮ್ರ, ಬ್ಯಾಂಕ್ಗಳು, ವಿಮೆ ಸೇರಿದಂತೆ ಇತರ ವಲಯಗಳ ಒಕ್ಕೂಟಗಳು ಮುಷ್ಕರ ಕ್ಕೆ ಬೆಂಬಲ ನೀಡಿದೆ. ರೈಲ್ವೆ ಮತ್ತು ರಕ್ಷಣಾ ವಲಯದ ಒಕ್ಕೂಟಗಳು ಹಲವಾರು ಸ್ಥಳಗಳಲ್ಲಿ ಮುಷ್ಕರವನ್ನು ಬೆಂಬಲಿಸಲು ಸಾಮೂಹಿಕ ಸಜ್ಜುಗೊಳಿಸಲಿವೆ ಎಂದು ಕಾರ್ಮಿಕ ಸಂಘಟನೆಗಳ ವೇದಿಕೆ ತಿಳಿಸಿದೆ.