ಬೆಂಗಳೂರು: ವಿಷ ಕುಡಿಸಿ ನವವಿವಾಹಿತೆಯನ್ನ ಕೊಲೆ ಮಾಡಲು ಯತ್ನ ನಡೆಸಿರುವ ಆರೋಪ ನಗರದಲ್ಲಿ ಕೇಳಿ ಬಂದಿದೆ. ಗಂಡ ಪ್ರದೀಪ್ ಹಾಗೂ ಅವರ ತಂದೆ, ತಾಯಿ ನಾದಿನಿ ಮೇಲೆ ಈ ಆರೋಪ ಮಾಡಲಾಗಿದೆ.
ನಗರದ ಕೆಂಪೇಗೌಡ ಕಾಲೇಜಿನಲ್ಲಿ ನರ್ಸಿಂಗ್ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಪಾವನಗೆ, ಕಳೆದ ಆರು ತಿಂಗಳ ಹಿಂದೆ ಪ್ರದೀಪ್ ಜೊತೆ ವಿವಾಹವಾಗಿತ್ತು. ಪ್ರದೀಪ್ ಫ್ಯಾಮಿಲಿ ಕೋರ್ಟ್ನಲ್ಲಿ ಶಿರಸ್ತೇದಾರ ಆಗಿ ಕೆಲಸ ಮಾಡಿಕೊಂಡಿದ್ದ. ಆದರೆ, ಮದುವೆಯಾದಾಗಿನಿಂದ ಹಲವು ಬಾರಿ ಗಂಡ-ಹೆಂಡತಿ ಮಧ್ಯೆ ಜಗಳವಾಗಿತ್ತು. ಇದರಿಂದ ಬೇಸತ್ತ ಪಾವನಾ ತವರು ಮನೆಯಲ್ಲಿ ವಾಸವಾಗಿದ್ದರು. ಆದರೆ ಗಂಡ 15 ದಿನಗಳೊಳಗಾಗಿ ಮನೆಗೆ ವಾಪಸ್ ಬರಬೇಕು ಅಂತಾ ಪತ್ನಿಗೆ ನೋಟಿಸ್ ಕಳಿಸಿದ್ದನಂತೆ.
ನಿನ್ನೆ ಪತ್ನಿಗೆ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದಾರೆ. ಪತಿಯ ಕರೆಯಂತೆ ನಿನ್ನೆ ಸಂಜೆ ಮರಿಯಮ್ಮನಪಾಳ್ಯದ ಪತಿ ಮನೆಗೆ ಪಾವನ ತೆರಳಿದ್ದು. ಈ ವೇಳೆ ಪಾವನರಿಗೆ ಹಲ್ಲೆ ಮಾಡಿ ವಿಷ ಕುಡಿಸಿದ್ದಾರೆ ಎಂದು ಪಾವನ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಸದ್ಯ ಪಾವನರ ಸ್ಥಿತಿ ಗಂಭೀರಾಗಿದೆ ಎನ್ನಲಾಗಿದೆ. ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆದರೆ, ಹಣ ಪಡೆದು ಆರೋಪಿಯನ್ನ ಪೊಲೀಸರು ಬಿಟ್ಟು ಕಳಿಸಿದ್ದಾರೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.