ಪಲಕ್ಕಾಡ್ : ಇದು ಅಪರೂಪದ ಪ್ರೇಮ ಪ್ರಕರಣ. ಸುಮಾರು ಹತ್ತು ವರ್ಷಗಳ ಕಾಲ ಪ್ರೇಮಿಗಳು ಕುಟುಂಬದವರ ವಿರೋಧದಿಂದ ಕದ್ದುಮುಚ್ಚಿ ಒಂದೇ ಕೋಣೆಯಲ್ಲಿ ಹತ್ತು ವರ್ಷ ಕಳೆದಿದ್ದರು. ಹೊರ ಜಗತ್ತಿಗೆ ತಿಳಿದರೆ ಪ್ರಾಣಕ್ಕೇ ಅಪಾಯ ಎಂಬತಿತ್ತು ಅವರ ಪರಿಸ್ಥಿತಿ. ಈ ಕಾರಣಕ್ಕೆ ಪ್ರೇಮಿಯು ತನ್ನ ಹುಡುಗಿಯನ್ನು ಹತ್ತು ವರ್ಷಗಳ ಕಾಲ ಕೋಣೆಯಿಂದ ಆಚೆ ಬರದಂತೆ ನೋಡಿಕೊಂಡಿದ್ದ. ಹಾಗಂತ ಆಕೆಯನ್ನು ಕಟ್ಟಿಹಾಕಿರಲಿಲ್ಲ. ಆಕೆಗೂ ಇದಕ್ಕೆ ಸಮ್ಮತಿಯಿತ್ತು. ಒಟ್ಟಿನಲ್ಲಿ ಇಬ್ಬರೂ ಒಂದಾಗಿರಬೇಕು ಎಂಬುದಷ್ಟೇ ಅವರ ಮುಖ್ಯ ಗುರಿಯಾಗಿತ್ತು. ಹತ್ತು ವರ್ಷಗಳ ಅಜ್ಞಾತವಾಸದ ನಂತರ ಇಂದು ಕಡೆಗೂ ಪ್ರೇಮಿಗಳು ಅಧಿಕೃತವಾಗಿ ಮದುವೆಯಾಗಿದ್ದಾರೆ. ಆ ಅಮರ ಪ್ರೇಮಿಗಳೇ ರೆಹಮಾನ್ ಮತ್ತು ಸಜಿತಾ.
ಕೇರಳದ ನೆನ್ಮಾರದಲ್ಲಿ ಇಂದು ಇಬ್ಬರೂ ರಿಜಿಸ್ಟರ್ ಮದುವೆಯಾಗಿದ್ದಾರೆ. ರಿಜಿಸ್ಟರ್ ಮದುವೆಯಾಗುವ ಮೂಲಕ ಹತ್ತು ವರ್ಷಗಳ ಅಜ್ಞಾತವಾಸವನ್ನು ಇಂದಿಗೆ ಅಂತ್ಯಗೊಳಿಸಿದ್ದು, ಹತ್ತು ವರ್ಷಗಳ ಕಾಲ ಇವರು ಒಟ್ಟಾಗಿದ್ದರು ಎಂಬುದು ಹೊರ ಜಗತ್ತಿಗೆ ತಿಳಿದೇ ಇರಲಿಲ್ಲ. ಇಬ್ಬರ ಮನೆಯವರೂ ಕಾಣೆಯಾಗಿರುವ ದೂರು ನೀಡಿದ್ದರು, ಆದರೆ ಇಬ್ಬರೂ ಇಷ್ಟು ವರ್ಷ ಒಟ್ಟಾಗಿಯೇ ಇದ್ದರು ಎನ್ನಲಾಗಿದೆ.
ರೆಹಮಾನ್ ಮತ್ತು ಸಜಿತಾ ಮೂಲತಃ ಕೇರಳದ ಅಳಿಯೂರಿನವರು. 2010ರಲ್ಲಿ 18 ವರ್ಷದವಳಾಗಿದ್ದ ಸಜಿತಾ ರೆಹಮಾನ್ ಜೊತೆ ಮದುವೆಯಾಗಲು ಮನೆ ಬಿಟ್ಟು ಓಡಿ ಬಂದಿದ್ದಳು. ರೆಹಮಾನ್ ಎಲೆಕ್ಟ್ರಿಕ್ ಕೆಲಸ, ಪೇಂಟಿ0ಗ್ ರೀತಿಯ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಆಕೆ ಮನೆ ಬಿಟ್ಟು ಓಡಿ ಬಂದ ಮೇಲೆ ಸಣ್ಣದೊಂದು ರೂಂ ಮಾಡಿ ಇಬ್ಬರೂ ವಾಸಿಸಲು ಆರಂಭಿಸಿದ್ದರು.
ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಇಬ್ಬರೂ 10 ವರ್ಷಗಳ ಬಳಿಕ, ಸಣ್ಣ ಕೋಣೆಯಿಂದ ಚಿಕ್ಕದೊಂದು ಮನೆಗೆ ಶಿಫ್ಟ್ ಆಗಿದ್ದರು. ರೆಹಮಾನ್ ಕಾಣೆಯಾಗಿದ್ದಾನೆ ಎಂದು ಕುಟುಂಬಸ್ಥರು ನೀಡಿದ ದೂರಿನ ಅನ್ವಯ ತನಿಖೆ ನಡೆಯುತ್ತಲೇ ಇತ್ತು. ಇತ್ತೀಚೆಗೆ ರೆಹಮಾನ್ನ ಅಣ್ಣಾ, ನೆನ್ಮಾರದಲ್ಲಿ ರೆಹಮಾನ್ನನ್ನು ನೋಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದ. ನಂತರ ಪೊಲೀಸರು ತನಿಖೆ ನಡೆಸಿದಾಗ ಇಬ್ಬರ ಪ್ರೀತಿಯ ಕಥೆ ಬೆಳಕಿಗೆ ಬಂದಿದೆ.
ಮೊದಲಿಗೆ, ಸಜಿತಾಳನ್ನು ರೆಹಮಾನ್ ಕೂಡಿಟ್ಟಿದ್ದ ಎಂದೇ ನಂಬಲಾಗಿತ್ತು. ಆದರೆ ವಿಚಾರಣೆ ವೇಳೆ, ತನ್ನ ಇಚ್ಚೆಯಂತೆಯೇ ರೆಹಮಾನ್ ನಾನು ಒಂದು ಕೋಣೆಯಲ್ಲಿದ್ದೆವು. ನಾನು ಆಚೆ ಬಂದರೆ ನಮ್ಮಿಬ್ಬರ ಪ್ರೀತಿಗೆ ಅಡೆತಡೆಗಳು ಉಂಟಾಗುವ ಸಾಧ್ಯತೆಯಿತ್ತು, ರೆಹಮಾನ್?ನನ್ನು ನಾನು ಪ್ರೀತಿಸುತ್ತೇನೆ ಎಂದು ಸಜಿತಾ ಹೇಳಿಕೆ ನೀಡಿದ್ದಳು. ಇದರ ಬಳಿಕ ಪ್ರಕರಣವನ್ನು ಪೊಲೀಸರು ಕ್ಲೋಸ್ ಮಾಡಿದ್ದರು.
ಇದೀಗ ಬುಧವಾರ ಬೆಳಗ್ಗೆ ಸಜಿತಾ ಮತ್ತು ರೆಹಮಾನ್ ಮದುವೆಯಾಗಿದ್ದಾರೆ. ಇಬ್ಬರ ಮುಂದಿನ ಜೀವನಕ್ಕೆ ಸಹಕಾರಿಯಾಗುವಂತೆ ಸರ್ಕಾರವೂ ಸಹಾಯಕ್ಕೆ ಬರುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ಕುಟುಂಬಸ್ಥರಿಗೆ ಹೆದರಿ, ಜೀವನದ ಅತ್ಯಮೂಲ್ಯ 10 ವರ್ಷಗಳನ್ನು ಇಬ್ಬರೂ ಒಂದೇ ಕೋಣೆಯಲ್ಲಿ ಕಳೆದಿದ್ದಾರೆ.