ಸಹಾಯ ಕೇಳಿದ ಕೇವಲ ಮೂರು ದಿನದಲ್ಲಿ ಆಕ್ಸಿಜನ್ ಯಂತ್ರ ಹಸ್ತಾಂತರ ಮಾಡಿದ ಶಾಸಕ ಅಶೋಕ್ ರೈ
ಪುತ್ತೂರು: ಶ್ವಾಸ ಕೋಶದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಳಿಕೆ ಗ್ರಾಮದ ಮಿತ್ತಳಿಕೆ ನಿವಾಸಿ ಕುಮಾರಿ ಪುಲಕಿತ ಎಂಬವರಿಗೆ ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಆಕ್ಸಿಜನ್ ಯಂತ್ರವನ್ನು ನೀಡಿದರು.
ಕಳೆದ ಹತ್ತು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಆರ್ಥಿಕವಾಗಿ ತೀರ ಬಡತನದಲ್ಲಿರುವ ಇವರಿಗೆ ಆಕ್ಸಿಜನ್ ಯಂತ್ರ ಖರೀದಿಸಲು ಹಣಕಾಸಿನ ಅಡಚಣೆಯಾಗಿತ್ತು. ತನ್ನ ಸಂಕಷ್ಟವನ್ನು ಕಳೆದ ಮೂರು ದಿನಗಳ ಹಿಂದೆ ಶಾಸಕರ ಬಳಿ ಹೇಳಿಕೊಂಡಿದ್ದರು. ಆಕ್ಸಿಜನ್ ಯಂತ್ರ ಕೊಡಿಸುವ ಭರವಸೆ ನೀಡಿದ್ದ ಶಾಸಕರು ಮೂರು ದಿನದೊಳಗೆ ಅದನ್ನು ಸಂತ್ರಸ್ಥ ಮಹಿಳೆಗೆ ವಿತರಿಸಿದ್ದಾರೆ. ಈ ಸಂದರ್ಭದಲ್ಲಿ ಅಳಿಕೆ ಗ್ರಾಪಂ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಉಪಸ್ಥಿತರಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು ನನ್ನ ಬಳಿ ಸಹಾಯ ಕೇಳಿ ಈ ಬಡ ಕುಟುಂಬ ಕಚೇರಿಗೆ ಕಳೆದ ಮೂರದಿನಗಳ ಹಿಂದೆ ಬಂದಿದ್ದರು. ತಕ್ಷಣವೇ ಮಹಿಳೆಯ ಉಸಿರಾಟಕ್ಕೆ ಅಗತ್ಯವಾಗಿ ಬೇಕಾದ ಆಕ್ಸಿಜನ್ ಯಂತ್ರವನ್ನು ಕೊಡಿಸಿದ್ದೇನೆ. ಅವರು ಆರೋಗ್ಯವಂತರಾಗಿರಲಿ ಎಂಬುದೇ ನನ್ನ ಆಶಯವಾಗಿದೆ ಎಂದು ತಿಳಿಸಿದ್ದಾರೆ.