ಉಳ್ಳಾಲ: ಉಳ್ಳಾಲದ ಬಂಡಿಕೊಟ್ಯದಲ್ಲಿ ಕಾಲೇಜು ಮತ್ತು ಹೈಸ್ಕೂಲ್ ತೆರಳುವ ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡಿ ಚುಡಾಯಿಸುತ್ತಾ ಕಿರುಕುಳ ನೀಡುತ್ತಿದ್ದ ಅಪ್ರಾಪ್ತನನ್ನು ಸ್ಥಳೀಯರು ಹಿಡಿದು ಧರ್ಮದೇಟು ನೀಡಿ ಉಳ್ಳಾಲ ಪೊಲೀಸ್ ಠಾಣೆಗೆ ನೀಡಿದ್ದಾರೆ.
ತೊಕ್ಕೊಟ್ಟು ಅಲೇಕಳದ ನಿವಾಸಿ 16 ವರ್ಷದ ಅಲ್ಪಸಂಖ್ಯಾತ ವರ್ಗದ ಅಪ್ರಾಪ್ತ ಹುಡುಗ ಸಾರ್ವಜನಿಕರ ಕೈಗೆ ಸೆರೆ ಸಿಕ್ಕಿದ್ದಾನೆ. ಕಳೆದ ಹಲವು ದಿನಗಳಿಂದ ಈತ ಬಂಡಿಕೊಟ್ಯದಲ್ಲಿ ಬೆಳಗ್ಗಿನ ಹೊತ್ತಲ್ಲಿ ಸ್ಕೂಟರಲ್ಲಿ ಸಂಚರಿಸುತ್ತಾ ದಾರಿಯಲ್ಲಿ ಹೋಗುವ ಕಾಲೇಜು, ಹೈಸ್ಕೂಲ್ ವಿದ್ಯಾರ್ಥಿನಿಯರ ಎದೆ ಮತ್ತು ಹಿಂಭಾಗವನ್ನು ಮುಟ್ಟಿ ಪರಾರಿಯಾಗುತ್ತಿದ್ದ ಎನ್ನಲಾಗಿದೆ.
ಈತನ ಕಿರುಕುಳಕ್ಕೆ ಬೇಸತ್ತ ಯುವತಿಯರು ಹೆದರಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು. ಈ ಬಗ್ಗೆ ಸ್ಥಳೀಯರು ಉಳ್ಳಾಲ ಠಾಣೆಗೆ ದೂರನ್ನೂ ನೀಡಿದ್ದರು. ಆದರೆ, ಹುಡುಗ ಮಾತ್ರ ತನ್ನ ಚಾಳಿ ಬಿಟ್ಟಿರಲಿಲ್ಲ.ಇಂದು ಬೆಳಗ್ಗೆ ಬಂಡಿಕೊಟ್ಯದ ಅಯ್ಯಪ್ಪ ಸ್ವಾಮಿ ಮಂದಿರದ ಬಳಿ ಕಾಮುಕ ಅಪ್ರಾಪ್ತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಸ್ಥಳೀಯರು ಹಿಡಿದು ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿಯನ್ನು ಪೊಲೀಸರು ವಿಚಾರಿಸಿದ್ದು ಈ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.