ವಿಟ್ಲ: ವಿಟ್ಲ ಸುತ್ತ ಮುತ್ತ ಲಿನ ಚರ್ಚ್ ಗಳಲ್ಲಿ ಕನ್ಯಾ ಮರಿಯಮ್ಮರ ಜನ್ಮ ದಿನವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.
ಕನ್ಯಾ ಮರಿಯಮ್ಮರ ಜನ್ಮ ದಿನದ ಜತೆಗೆ ತೆನೆ ಹಬ್ಬವನ್ನು ಜತೆಯಾಗಿ ಆಚರಿಸುವುದು ಕರಾವಳಿ ಜಿಲ್ಲೆಯ ವಿಶೇಷತೆ. ಪ್ರತಿ ವರ್ಷವೂ ಹಬ್ಬದ ಪ್ರಯುಕ್ತ ಚರ್ಚ್ ಯಲ್ಲಿ ವಿಶೇಷ ಪೂಜೆ, ಮೆರವಣಿಗೆ, ಪರಸ್ಪರ ಶುಭಾಶಯ ವಿನಿಮಯ ಮಾಡುವ ಮೂಲಕ ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಈ ವರ್ಷ ಕೊರೊನಾ ಮಹಾಮಾರಿಯಿಂದಾಗಿ ಸರ್ಕಾರದ ನಿಯಮದಂತೆ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಲಾಗಿದೆ.
ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಧರ್ಮಗುರು ಗ್ರೆಗರಿ ಪೆರೇರಾ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸರ್ಕಾರದ ನಿಯಮದಂತೆ ಒಂದು ಕುಟುಂಬದ ಇಬ್ಬರಿಗೆ ಮಾತ್ರ ಪೂಜೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಕುಟುಂಬದ ಸದಸ್ಯರು ಜತೆಯಾಗಿ ಮನೆಯಲ್ಲಿ ಹಬ್ಬದ ಭೋಜನ ಸವಿದರು.
ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಧರ್ಮಗುರು ವಿಶಾಲ್ ಮೋನಿಸ್ ಅವರ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ಪ್ರತಿಬಾರಿ ಒಂದು ಪೂಜೆ ನಡೆಸಲಾಗುತ್ತಿತ್ತು. ಈ ಬಾರಿ ಸರ್ಕಾರದ ನಿಯಮ ಪಾಲಿಸುವ ಉದ್ದೇಶದಿಂದ ಎರಡು ಹೊತ್ತು ಪೂಜೆ ಆಯೋಜಿಸಿ, ಪ್ರತ್ಯೇಕವಾಗಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.
ವಿಟ್ಲದ ಶೋಕಾಮಾತೆ ಇಗರ್ಜಿಯಲ್ಲಿ ಧರ್ಮಗುರು ಐವನ್ ಮೈಕಲ್ ರೋಡ್ರಿಗಸ್ ನೇತೃತ್ವದಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು.