ಸರ್ಕಾರಿ ಶಾಲಾ ಮಕ್ಕಳಿಂದ ತಿಂಗಳಿಂದ ೧೦೦ ರೂ ಸಂಗ್ರಹಕ್ಕೆ ಮುಂದಾದ ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಪೋಷಕರಿಂದ ದಾನ, ದೇಣಿಗೆ ರೂಪದಲ್ಲಿ ಮಾಸಿಕ ತಲಾ 100 ರೂ ಸಂಗ್ರಹಕ್ಕೆ ಅವಕಾಶ ನೀಡಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಸಂಸ್ಥಾಪಕ ಮಹಾಪೋಷಕ ಪ್ರೊ.ವಿ.ಪಿ. ನಿರಂಜನಾರಾಧ್ಯ ಪತ್ರ ಬರೆದಿದ್ದಾರೆ.
ಉಚಿತ ಮತ್ತು ಕಡ್ಡಾಯವಾದ ಗುಣಾತ್ಮಕ ಶಿಕ್ಷಣ ಒದಗಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಶಿಕ್ಷಣ ಸಚಿವ ನಾಗೇಶ್ ಅವರು ಸಂವಿಧಾನಾತ್ಮಕ ಹಾಗೂ ನೆಲದ ಕಾನೂನುಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಲು ಸಂಪೂರ್ಣ ವಿಫಲರಾಗಿದ್ದು, ಅವರನ್ನು ಕೂಡಲೇ ಸಚಿವ ಸ್ಥಾನದಿಂದ ಬಿಡುಗಡೆಗೊಳಿಸಬೇಕು ಎಂದು ಪ್ರೊ.ವಿ.ಪಿ.ನಿರಂಜನಾರಾಧ್ಯ ಒತ್ತಾಯಿಸಿದ್ದಾರೆ.
ಚೈಲ್ಡ್ ರೈಟ್ಸ್ ಟ್ರಸ್ಟ್ ನಿರ್ದೇಶಕ ನಾಗಸಿಂಹ ಜಿ.ರಾವ್ ಅವರು ಶಿಕ್ಷಣ ಸಚಿವ ನಾಗೇಶ್ ಅವರಿಗೆ ಪತ್ರ ಬರೆದಿದ್ದು, ಪೋಷಕರು ಸ್ವಇಚ್ಛೆಯಿಂದ ದೇಣಿಗೆ ನೀಡದಿದ್ದರೆ ಶಾಲೆಯ ಅಭಿವೃದ್ಧಿ ಕೆಲಸಗಳು ಆಗುವುದಿಲ್ಲವೇ. ಎಸ್ಡಿಎಂಸಿ ಸದಸ್ಯರು ದೇಣಿಗೆ ಸಂಗ್ರಹ ಮಾಡುವುದು ಕಡ್ಡಾಯವೇ. ದೇಣಿಗೆ ನೀಡುವವರ ಹೆಸರನ್ನು ಗೌಪ್ಯವಾಗಿ ಇರಿಸಲಾಗುವುದೇ. ಪ್ರತಿ ತಿಂಗಳೂ 100 ರೂ. ಕೊಡುತ್ತಾ ಬರುವುದು ಶುಲ್ಕ ರೂಪ ಪಡೆದುಕೊಂಡು ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕೆಂಬ ಆಶಯಕ್ಕೆ ಧಕ್ಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಎಐಡಿಎಸ್ಒ ರಾಜ್ಯ ಸಮಿತಿಯೂ ದೇಣಿಗೆ ಸಂಗ್ರಹಕ್ಕೆ ವಿರೋಧ ವ್ಯಕ್ತಪಡಿಸಿದೆ.
ಬೊಮ್ಮಾಯಿ ಅವ್ರಿಗೆ ದಮ್ ತಾಕತ್ತು ಇದ್ದರೆ ಹಣ ಬಿಡುಗಡೆ ಮಾಡಲಿ – ಸಿದ್ದರಾಮಯ್ಯ
‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ವೇದಿಕೆ ಮೇಲೆ ನಿಂತು ತೋರುವ ನಿಮ್ಮ ದಮ್, ತಾಕತ್ತು ವಿದ್ಯಾರ್ಥಿಗಳ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವುದರಲ್ಲಿ ತೋರಿಸಿ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಅಲ್ಲದೆ, ಸರ್ಕಾರಿ ಶಾಲಾ ಮಕ್ಕಳ ಪೋಷಕರಿಂದ ಹಣ ಸಂಗ್ರಹಿಸುವಂತೆ ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಸ್ಥಗಿತಗೊಂಡಿರುವ ಎಲ್ಲಾ ಯೋಜನೆಗಳನ್ನು ಪುನರ್ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.