ಗೃಹಿಣಿಯೋರ್ವಳು ಮಕ್ಕಳನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹೆಡ್ ಬಂದರ್ ಬಳಿ ನಡೆದಿದೆ.
ನಿವೇದಿತಾ ನಾಗರಾಜ ಭಂಡಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ಗುರುತಿಸಲಾಗಿದೆ. . ಸಾಂತಗಲ್ ಗ್ರಾಮದ ನಿವಾಸಿಯಾಗಿರುವ ನಿವೇದಿತಾ, ನಿನ್ನೆ ಸಂಜೆ ಮನೆಯಿಂದ ಇಬ್ಬರು ಗಂಡುಮಕ್ಕಳನ್ನು ಸ್ಕೂಟಿಯ ಹಿಂದೆ ಕೂಡಿಸಿಕೊಂಡು ಕುಮಟಾದ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ನಿಲ್ದಾಣಕ್ಕೆ ಬಂದ ಬಳಿಕ ಮಕ್ಕಳಿಬ್ಬರನ್ನು ನಿಲ್ದಾಣದಲ್ಲೇ ಕೂರುವಂತೆ ತಿಳಿಸಿ ಸಮುದ್ರಕಡೆ ತೆರಳಿ, ಸ್ಕೂಟಿಯ ಹಿಂಬದಿ ಸೀಟಿನಲ್ಲಿ ಮಾಂಗಲ್ಯ, ಕಾಲುಂಗುರ, ಮೊಬೈಲ್ ಫೋನ್ ಇಟ್ಟು ಸಮುದ್ರಕ್ಕೆ ಹಾರಿದ್ದಾರೆ.
ಸಮುದ್ರಕ್ಕೆ ಹಾರುವ ಮಹಿಳೆಯನ್ನು ಲೈಫ್ಗಾರ್ಡ್ ಗಮನಿಸಿದ್ದರು, ಈ ವೇಳೆ ಲೈಫ್ ಗಾರ್ಡ್ ಈಜುಪಟುಗಳ ಸಹಾಯದಿಂದ ಎಷ್ಟೇ ಹುಡುಕಾಡಿದ್ದರೂ, ಬೃಹತ್ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿರುವ ಮಹಿಳೆಯನ್ನು ಕಾಪಾಡಲು ವಿಫಲರಾಗಿದ್ದಾರೆ. ಘಟನಾ ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿದ್ದಾರೆ. ನಿವೇದಿತಾ ಆತ್ಮಹತ್ಯೆ ಕಾರಣ ತಿಳಿದು ಬಂದಿಲ್ಲ.