



ಮೂಲ್ಕಿ: ಕಂಬಳ ಸ್ಪರ್ಧೆಯಲ್ಲಿ ಕೋಣಗಳು ಬಹುಮಾನ ಗಳಿಸಿದ ಹಿನ್ನೆಲೆಯಲ್ಲಿ ಮಾಲಕರಿಂದ ಹಣ ಮತ್ತು ಬಂಗಾರದ ಸರ ಪಡೆಯಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಶ್ಯಾಮ ಸುಂದರ್ ಶೆಟ್ಟಿ, ಅಕ್ಷಯ್ ಪೂಜಾರಿ ಹಾಗೂ ಸುವಿನ್ ಕಾಂಚನ್ ಎಂದು ಗುರುತಿಸಲಾಗಿದೆ. ಅಂಗಾರಕಟ್ಟೆ ಕೆಂಚನಕೆರೆ ನಿವಾಸಿ ಸಂಶುದ್ದೀನ್ ಅವರಿಗೆ ಆರೋಪಿಗಳು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಸಂಶುದ್ದೀನ್ ಅವರು ಮುಂಬೈನಲ್ಲಿ ನೆಲೆಸಿರುವ ಉದ್ಯಮಿಯೊಬ್ಬರಿಗೆ ಸೇರಿದ ಗದ್ದೆ, ತೋಟ ಹಾಗೂ ಮನೆಯನ್ನು ನೋಡಿಕೊಳ್ಳುತ್ತಿದ್ದು, ಮೂಲ್ಕಿ ಅರಸು ಕಂಬಳಕ್ಕೆ ಕೋಣಗಳನ್ನು ತಂದಿದ್ದರು. ಕಂಬಳದಲ್ಲಿ ಕೋಣಗಳಿಗೆ ಬಹುಮಾನವಾಗಿ ಬಂಗಾರದ ಸರ ಹಾಗೂ ನಗದು ಲಭಿಸಿದ್ದು, ಅದನ್ನು ನೀಡುವಂತೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಅಲ್ಲದೆ, “ನೀನು ದನಗಳನ್ನು ಕಸಾಯಿಖಾನೆಗೆ ಒಪ್ಪಿಸುತ್ತೀಯ” ಎಂದು ಸುಳ್ಳು ಆರೋಪ ಮಾಡಿ ಮಾನಸಿಕವಾಗಿ ಪೀಡಿಸಿದ್ದಾರೆಯೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಂಶುದ್ದೀನ್ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಮೂಲ್ಕಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.








