ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನ ಗಿರಿ. ದಿನ ನಿತ್ಯ ಇಲ್ಲಿಗೆ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಜೊತೆಗೆ ಈ ಬೆಟ್ಟದ ಸಾಲಿನಲ್ಲಿ ಸೀತಾಳ್ಯಯನ ಗಿರಿ, ಪಂಡರಹಳ್ಳಿ, ಏರ್ ನೂರ್ ಖಾನ್ ಗ್ರಾಮಗಳಿವೆ. ಆದರೆ ಕಳೆದ ಕೆಲ ದಿನಗಳಿಂದ ಇಲ್ಲಿ ಹುಲಿರಾಯನ ಸದ್ದು ಗದ್ದಲ ಆರಂಭವಾಗಿದೆ.ನಾಲ್ಕು ಮರಿಗಳ ಜೊತೆ ಇರುವ ಹುಲಿರಾಯನ ವಿಡಿಯೋವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗಾಗಿ ಇಲ್ಲಿನ ಜನರು ಹುಲಿಯೊಂದು ಕಾಣಿಸಿಕೊಂಡಿದೆ ಅಂತಾ ಭಯಭೀತರಾಗಿದ್ದಾರೆ.
ಕಳೆದ ನಾಲ್ಕು ವರ್ಷದ ಹಿಂದೆ ಈ ಪ್ರದೇಶದ ಪಂಡರುವಳ್ಳಿ ಗ್ರಾಮದ ಮಹಿಳೆಯೊಬ್ಬಳು ಹುಲಿ ಬಾಯಿಗೆ ಆಹಾರವಾಗಿದ್ರು. ಹೀಗಾಗಿ ಸ್ಥಳೀಯರು ಮತ್ತೆ ಹುಲಿ ಏನಾದ್ರು ಅನಾಹುತ ಸೃಷ್ಟಿ ಮಾಡಿ ಬಿಡುತ್ತೋ ಎಂಬ ಆತಂಕಕ್ಕೆ ಒಳಗಾಗಿದ್ದಾರೆ. ರಾತ್ರಿ ಇರಲಿ, ಹಗಲೊತ್ತಲ್ಲೂ ಜನರು ತಿರುಗಾಡಲು ಭಯಪಡುವಂತಾಗಿದೆ.ಇನ್ನು ಈ ಭಾಗದಲ್ಲಿ ಕೆಲವೊಮ್ಮ ಹುಲಿಗಳ ದರ್ಶನವೂ ಆಗಿದೆ. ಮೇವಿಗೆ ಹೋದ ಹಸುಗಳು ವಾಪಸ್ ಬರುತ್ತವೆ ಅನ್ನೋ ಗ್ಯಾರಂಟಿಯೇ ಇಲ್ಲದಂತಾಗಿದೆ.
ಇಷ್ಟೆಲ್ಲ ಆದರೂ ಅರಣ್ಯ ಇಲಾಖೆ ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹುಲಿ ಭಯದಲ್ಲಿ ಜನ ಆತಂಕದಲ್ಲೇ ಓಡಾಡುತ್ತಿದ್ದಾರೆ. ಸಂಬಂಧಪಟ್ಟೋರು ಮಾತ್ರ ಸಂಬಂಧವೇ ಇಲ್ಲದಂತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಿರಿ ಪ್ರದೇಶದ ಹಲವು ಗ್ರಾಮಗಳ ನಿತ್ಯವೂ ಹುಲಿಯ ಆತಂಕದಲ್ಲಿ ಕಾಲ ದೂಡ್ತಿದ್ದಾರೆ. ಆಗಾಗ ಕಾಣಿಸಿಕೊಳ್ಳೋ ಹುಲಿಗಳ ಜೊತೆ ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಸ್ಥಳೀಯರಲ್ಲಿ ಮತ್ತಷ್ಟು ಭಯ ಹುಟ್ಟಿಸುತ್ತಿದೆ. ಇನ್ನಾದ್ರೂ ಅರಣ್ಯ ಇಲಾಖೆ ಇಂತಹ ಪ್ರಕರಣಕ್ಕೆ ಕಡಿವಾಣ ಹಾಕಬೇಕು ಅನ್ನೋದು ಸ್ಥಳೀಯರ ಆಗ್ರಹವಾಗಿದೆ.