Sunday, May 19, 2024
spot_imgspot_img
spot_imgspot_img

ಕತಾರ್ ನಿಂದ ಭಾರತಕ್ಕೆ ಹಡಗುಗಳ ಮೂಲಕ ಬಂತು 20 ಮೆಟ್ರಿಕ್ ಟನ್ ಆಮ್ಲಜನಕ

- Advertisement -G L Acharya panikkar
- Advertisement -

ಮುಂಬೈ: ದೇಶದಲ್ಲಿ ಕೊರೊನಾ ಸಂಕಷ್ಟ ಎದುರಾಗಿರುವ ಹಿನ್ನಲೆಯಲ್ಲಿ ಭಾರತೀಯ ನೌಕಾಪಡೆಯ ತರ್ಕಶ್ ಹಡಗು 20 ಮೆಟ್ರಿಕ್ ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ಹೊಂದಿರುವ ಎರಡು ಕಂಟೇನರ್‌ಗಳು ಮತ್ತು 230 ಆಮ್ಲಜನಕ ಸಿಲಿಂಡರ್‌ಗಳನ್ನು ಕತಾರ್‌ನಿಂದ ಹೊತ್ತು ತಂದಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

‘ಸಮುದ್ರ ಸೇತು II’ ಕಾರ್ಯಾಚರಣೆಯಡಿ ದೇಶಕ್ಕೆ ಆಮ್ಲಜನಕ ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ತರಲು ಭಾರತೀಯ ನೌಕಾಪಡೆ ತನ್ನ ವಿವಿಧ ಹಡಗುಗಳನ್ನು ನಿಯೋಜಿಸಿದೆ.

ಫ್ರೆಂಚ್ ಮಿಷನ್ ‘ಆಕ್ಸಿಜನ್ ಸಾಲಿಡಾರಿಟಿ ಬ್ರಿಡ್ಜ್’ ನ ಭಾಗವಾಗಿ ಆಮ್ಲಜನಕ ಕಂಟೇನರ್‌ಗಳನ್ನು ಕಳುಹಿಸಲಾಗಿದೆ. ಪ್ರಾಣವಾಯು ಸಿಲಿಂಡರ್‌ಗಳನ್ನು ಕತಾರ್‌ನಲ್ಲಿರುವ ಭಾರತೀಯರು ಉಡುಗೊರೆಯಾಗಿ ನೀಡಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. ಆಕ್ಸಿಜನ್ ಸರಕನ್ನು ಮಹಾರಾಷ್ಟ್ರದ ನಾಗರಿಕ ಆಡಳಿತಕ್ಕೆ ಹಸ್ತಾಂತರಿಸಲಾಗಿದೆ ಎಂದು ನೌಕಾಪಡೆ ತಿಳಿಸಿದೆ.

ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತವನ್ನು ಬೆಂಬಲಿಸುವ ಫ್ರೆಂಚ್ ಕಾರ್ಯಾಚರಣೆಯ ಭಾಗವಾಗಿ ಸೋಮವಾರ ಐಎನ್‌ಎಸ್ ತ್ರಿಕಾಂಡ್ ಹಡಗಿನ ಮೂಲಕ ಕತಾರ್‌ನಿಂದ 40 ಮೆಟ್ರಿಕ್ ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ಇಲ್ಲಿಗೆ ತರಲಾಗಿತ್ತು.

ಮುಂಬೈ, ವಿಶಾಖಪಟ್ಟಣ ಮತ್ತು ಕೊಚ್ಚಿಯ ಎಲ್ಲ ಮೂರು ನೌಕಾಪಡೆಗಳ ಹಡಗುಗಳನ್ನು ‘ಸಮುದ್ರ ಸೇತು II’ ಕಾರ್ಯಾಚರಣೆಯಡಿ ಆಮ್ಲಜನಕ ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ತರಲು ನಿಯೋಜಿಸುವ ಮೂಲಕ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ ಎಂದು ನೌಕಾಪಡೆ ತಿಳಿಸಿದೆ.

ಕಳೆದ ವರ್ಷ, ವಂದೇ ಭಾರತ್ ಮಿಶನ್ ಕಾರ್ಯಾಚರಣೆಯ ಭಾಗವಾಗಿ ನೌಕಾಪಡೆಯು ಆಪರೇಷನ್ ಸಮುದ್ರ ಸೇತುವನ್ನು ಪ್ರಾರಂಭಿಸಿತ್ತು, ಇದರ ಅಡಿಯಲ್ಲಿ ಮಾಲ್ಡೀವ್ಸ್, ಶ್ರೀಲಂಕಾ ಮತ್ತು ಇರಾನ್‌ನಿಂದ 4,000 ಭಾರತೀಯರನ್ನು ಭಾರತಕ್ಕೆ ಮರಳಿ ಕರೆತರಲಾಗಿತ್ತು.

ಭಾರತವು ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಗೆ ಸಿಲುಕಿ ತತ್ತರಿಸುತ್ತಿರುವುದರಿಂದ ಹಲವು ದೇಶಗಳು ಆಮ್ಲಜನಕ ಸೇರಿದಂತೆ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸುವ ಮೂಲಕ ನೆರವಿನ ಹಸ್ತ ಚಾಚಿವೆ.

- Advertisement -

Related news

error: Content is protected !!