ತ್ರಿಶೂರ್: ಸೆಪ್ಟೆಂಬರ್ 29ರಂದು ದಂತ ವೈದ್ಯ ಡಾ. ಸೋನಾಗೆ ಕುಟ್ಟನೆಲ್ಲೂರಿನಲ್ಲಿರುವ ಕ್ಲಿನಿಕ್ನಲ್ಲಿ ಕುಟುಂಬದ ಎದುರೇ ಚಾಕು ಇರಿದು ಪರಾರಿಯಾಗಿದ್ದ ಪವರಟ್ಟಿ ಮೂಲದ ಮಹೇಶ್ ತ್ರಿಶೂರ್ನಲ್ಲಿ ಬಚ್ಚಿಟ್ಟುಕೊಂಡಿದ್ದ.
ಇತ್ತ ಗಂಭೀರವಾಗಿ ಗಾಯಗೊಂಡಿದ್ದ ಸೋನಾ ಚಕಿತ್ಸೆ ಫಲಕಾರಿಯಾಗದೇ ಅಕ್ಟೋಬರ್ 4ರಂದು ತ್ರಿಶೂರ್ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮಂಗಳವಾರ ಸಂಜೆ ಪೂನಕುನ್ನಮ್ನಲ್ಲಿ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.
ಬಗ್ಗೆ ಹೇಳಿಕೆ ನೀಡಿರುವ ಆರೋಪಿ ನಾನು ಸೋನಾಳ ಉದ್ಯಮ ಪಾಲುದಾರನಾಗಿದ್ದೆ. ಆಕೆ ತ್ರಿಸ್ಸೂರ್ನಲ್ಲಿ ಬಿಡಿಎಸ್ ಅಧ್ಯಯನ ಮಾಡುವಾಗ ನನಗೆ ಪರಿಚಯವಾದಳು. ಡಿವೋರ್ಸ್ ನಂತರ ತ್ರಿಸ್ಸೂರ್ಗೆ ಮರಳಿ ಕುರಿಯಾಚಿರಾ ಏರಿಯಾದಲ್ಲಿರುವ ಫ್ಲ್ಯಾಟ್ನಲ್ಲಿ ನನ್ನೊಂದಿಗೆ ಲಿವ್ ಇನ್ ರಿಲೇಷನ್ನಲ್ಲಿದ್ದಳು.
ಎರಡು ವರ್ಷಗಳ ಹಿಂದೆ ಕುಟ್ಟನೆಲ್ಲೂರಿನಲ್ಲಿ ನಾನು ಮತ್ತು ಸೋನಾ ಡೆಂಟಲ್ ಕ್ಲಿನಿಕ್ ಸ್ಥಾಪಿಸಿದ್ದೆವು. ಅದರಲ್ಲಿ ನಾನು ಸಹ ಬಂಡವಾಳ ಹೂಡಿದ್ದೆ. ಕ್ಲಿನಿಕ್ ಆರಂಭವಾದಾಗಿನಿಂದ ಸೋನಾ ನನಗೆ ಲಾಭವಾಗಲಿ ಅಥವಾ ಬಂಡವಾಳದ ಹಣವನ್ನಾಗಲಿ ಹಂಚಿಕೊಳ್ಳಲಿಲ್ಲ. ಕೇಳಿದರೂ ನನ್ನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಹೀಗಾಗಿ ಕ್ಲಿನಿಕ್ನಿಂದ ಬರುವ ಇಡೀ ಆದಾಯವನ್ನು ತೆಗೆದುಕೊಳ್ಳಲು ಆರಂಭಿಸಿದೆ ಎಂದು ಮಹೇಶ್ ಹೇಳಿದ್ದು, ಇದೇ ವಿಚಾರವಾಗಿ ಇಬ್ಬರ ನಡುವೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.