


ರಾಗಿ ಹೊಲಕ್ಕೆ ಹೋಗಿದ್ದ ವೃದ್ದೆಯ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗುಂಜೂರು ಗ್ರಾಮದಲ್ಲಿ ನಡೆದಿದೆ.
ಮೃತ ವೃದ್ಧೆಯನ್ನು ಚೌಡಮ್ಮ(75) ಎಂದು ಗುರತಿಸಲಾಗಿದೆ. ವೃದ್ದೆಯನ್ನು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ ಗ್ರಾಮದ ಆರೋಪಿ ಪ್ರಭಾಕರ್ ( 45 ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಅಜ್ಜಿ ಹಾಗೂ ಪ್ರಭಾಕರ್ ಕುಟುಂಬಸ್ಥರ ನಡುವೆ ಕಲಹ ನಡೆಯುತ್ತಿದ್ದು, ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ.
ಚೌಡಮ್ಮ ಅವರು ಹೊಲದಲ್ಲಿ ಜಾನುವಾರು ಮೇಯಿಸುತ್ತಿದ್ದ ವೇಳೆ ರಾಗಿ ಹೊಲದಲ್ಲಿ ದನ-ಕರುಗಳನ್ನು ಬಿಟ್ಟು ಬೆಳೆ ಹಾಳು ಮಾಡುತ್ತಾರೆ ಎಂಬ ವಿಚಾರವಾಗಿ ಚೌಡಮ್ಮ ಹಾಗೂ ಪ್ರಭಾಕರ್ ನಡುವೆ ಜಗಳವಾಗಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದಿದ್ದು ಹಿಂಬದಿಯಿಂದ ವೃದ್ದೆಯ ತಲೆಗೆ ಹೊಡೆದು, ಸೀರೆಯಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿದೆ. ಸಂಜೆಯಾದರೂ ಮನೆಗೆ ಬಾರದ ವೃದ್ದೆಯನ್ನು ಹುಡುಕಾಡುತ್ತಾ ಹೋದ ಮನೆಯವರಿಗೆ ಈ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








