ಮದುವೆ ಆಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರನ ಮನೆಯಲ್ಲೇ ಪ್ರಿಯತಮೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ನಡೆದಿದೆ. ಗೆಳೆಯನ ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಹುಟ್ಟುಹಬ್ಬದ ಆಚರಣೆ ವೇಳೆ ಸ್ನೇಹಿತರ ಎದುರೇ ಪ್ರಿಯತಮೆಗೆ ಕಪಾಳಮೋಕ್ಷ ಮಾಡಿದ ಪ್ರಿಯಕರ ವರ್ತನೆಗೆ ಬೇಸತ್ತ ಪ್ರಿಯತಮೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಕಂದೇಗಾಲ ಗ್ರಾಮದ ಪ್ರಭುಸ್ವಾಮಿ ಎಂಬುವರ ಪುತ್ರ ತ್ಯಾಗರಾಜ್ ಅದೇ ಗ್ರಾಮದ ಕಾವ್ಯ ಎಂಬ ಯುವತಿಯನ್ನ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸಿದ್ದಾನೆ. ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಮೂರು ದಿನಗಳ ಹಿಂದೆ ಸ್ನೇಹಿತರೊಂದಿಗೆ ಹುಟ್ಟುಹಬ್ಬದ ಸಂಭ್ರಮಾಚರಣೆ ಆಚರಿಸಲು ಮುಂದಾದ ತ್ಯಾಗರಾಜ್ ಪ್ರಿಯತಮೆ ಕಾವ್ಯಾಳನ್ನೂ ಸಹ ಆಹ್ವಾನಿಸಿದ್ದ.
ಮದುವೆ ಪ್ರಸ್ತಾಪ ಮಾಡಿದ ಕಾವ್ಯಾಗೆ ಸ್ನೇಹಿತರ ಎದುರು ಕಪಾಳಕ್ಕೆ ಹೊಡೆದಿದ್ದಾನೆ. ಸ್ನೇಹಿತನ ವರ್ತನೆಯಿಂದ ನೊಂದ ಕಾವ್ಯ ಕಂದೇಗಾಲ ಗ್ರಾಮದ ಗೆಳೆಯನ ಮನೆಗೆ ಆಗಮಿಸಿ ತ್ಯಾಗರಾಜ್ ತಾಯಿ ಜೊತೆ ಸಂಪೂರ್ಣವಾಗಿ ವಿಚಾರವನ್ನು ತಿಳಿಸಿ ನನ್ನನ್ನು ಮದುವೆ ಆಗುವುದಾಗಿ ನಂಬಿಸಿ ವಂಚಿಸುತ್ತಿದ್ದಾನೆ ಎಂದು ಆರೋಪಿಸಿ ವಿಷ ಸೇವಿಸಿದ್ದಾಳೆ. ನಂತರ ಗ್ರಾಮಸ್ಥರು ಕಾವ್ಯಳನ್ನ ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ ಆರ್ ಆಸ್ಪತ್ರೆಯ ತುರ್ತು ಘಟಕಕ್ಕೆ ರವಾನಿಸಲಾಗಿದೆ. ತ್ಯಾಗರಾಜ್ ತಂದೆ ಮದುವೆಗೆ ಅಡ್ಡಿಪಡಿಸಿದ್ದಾರೆಂದು ಹೇಳಲಾಗಿದೆ. ಯುವತಿಗೆ ಬೇರೆ ಸಂಬಂಧಗಳು ಬಂದಾಗ ತ್ಯಾಗರಾಜ್ ಮದುವೆ ಆಗುವ ಭರವಸೆ ನೀಡಿ ನಿಲ್ಲಿಸಿದ್ದಾನೆ. ಕೈಕೊಡುವ ಸೂಕ್ಷ್ಮತೆ ಅರಿತ ಕಾವ್ಯ ಹುಟ್ಟುಹಬ್ಬದ ಸಂಧರ್ಭದಲ್ಲೇ ಮದುವೆ ಪ್ರಸ್ತಾಪ ಮಾಡಿದ್ದಾಳೆ. ಈ ವೇಳೆ ಹಲ್ಲೆ ಮಾಡಿದ್ದಾನೆ. ಹುಲ್ಲಹಳ್ಳಿ ಪೊಲೀಸರು ಕೆ ಆರ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ನ್ಯಾಯ ಕೊಡಿಸುವಂತೆ ಯುವತಿ ಮನೆಯವರು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.