Tuesday, May 7, 2024
spot_imgspot_img
spot_imgspot_img

ಯುವತಿಯನ್ನು ಚುಡಾಯಿಸಿದ ಆರೋಪ; ಯುವಕನಿಗೆ ಮಾರಣಾಂತಿಕ ಹಲ್ಲೆ!

- Advertisement -G L Acharya panikkar
- Advertisement -

ಮೈಸೂರು: ಯುವತಿಯೊಬ್ಬಳನ್ನು ಚುಡಾಯಿಸಿದ ಆರೋಪದಿಂದ ಯುವಕನಿಗೆ ಯುವತಿ ಸಂಬಂಧಿಕರು ಹಿಗ್ಗಾಮುಗ್ಗ ಥಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ನಡೆದಿದೆ.

ಗಂಭೀರವಾಗಿ ಹಲ್ಲೆಗೊಳಗಾದ ಯುವಕ ಪಿರಿಯಾಪಟ್ಟಣ ತಾಲ್ಲೂಕಿನ ಉತ್ತೇನಹಳ್ಳಿ ರಾಜು. ಆತನನ್ನು ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೊಳಗಾದ ರಾಜು ಕೆಲ ಸಮಯದ ಹಿಂದೆ ಯುವತಿಯೊಬ್ಬಳನ್ನು ಚುಡಾಯಿಸಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಕಾರಣದಿಂದ ಕುಪಿತರಾಗಿದ್ದ ಯುವತಿ ಸಂಬಂಧಿಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

ರಾಜು ಮೆಣಸಿನಕಾಯಿ ವ್ಯಾಪಾರಿಯೊಬ್ಬರ ಬಳಿ ಕೂಲಿ ಕೆಲಸ ಮಾಡುತ್ತಿದ್ದನು. ಪಂಚವಳ್ಳಿ ಸರ್ಕಲ್ ಬಳಿಯ ಪೆಟ್ರೋಲ್ ಬಂಕ್ ಮುಂದೆ ಇರುವ ಯುವತಿಯನ್ನು ಚುಡಾಯಿಸುತ್ತಿರುವುದನ್ನು ಯುವತಿಯ ಅತ್ತೆ ಮಗ ಕಿರಣ್ ಇದನ್ನೆಲ್ಲಾ ಗಮನಿಸಿದ್ದನು. ಅಲ್ಲದೇ, ಈ ಬಗ್ಗೆ ಹಲವು ಬಾರಿ ರಾಜುವಿಗೆ ಎಚ್ಚರಿಕೆಯನ್ನೂ ನೀಡಿದ್ದರು ಎಂಬ ಮಾತು ಕೇಳಿಬಂದಿದೆ.

ಪೆಟ್ರೋಲ್ ಬಂಕ್ ಮುಂಭಾಗದಲ್ಲೇ ಇರುವ ಕಟ್ಟಡದಲ್ಲಿ ಮೆಣಸಿನಕಾಯಿ ತುಂಬಲು ಬಂದ ರಾಜುವಿನ ಮೇಲೆ ಆರೋಪಿಗಳಾದ ಕಿರಣ್, ಪುನೀತ್, ಪ್ರಕಾಶ್ ನವೀನ್ ಏಕಾಏಕಿ ಹಲ್ಲೆ ನಡೆಸಿದ್ದು, ಈ ಘಟನೆಯ ದೃಶ್ಯ ಪೆಟ್ರೋಲ್ ಬಂಕ್ ಬಳಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಾಲಿನ ಕ್ಯಾನ್ ಹಿಡಿದುಕೊಂಡು ಬಂದ ಆರೋಪಿಗಳು ಪೆಟ್ರೋಲ್ ತುಂಬಿಸುತ್ತಾ ಬೈಕ್ ಮೇಲೆ ಕುಳಿತಿದ್ದ ರಾಜು ಮೇಲೆ ಹಲ್ಲೆಗೈದಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಹಲ್ಲೆಯಿಂದಾಗಿ ಗಾಯಗೊಂಡ ರಾಜು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಹಲ್ಲೆ ನಡೆಸಿದ ಯುವತಿ ಸಂಬಂಧಿಕರಾದ ಕಿರಣ್, ಪುನೀತ್, ಪ್ರಕಾಶ್ ನವೀನ್ ಇವರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!