ಮೈಸೂರು: ಮನನೊಂದು ರಾಜೀನಾಮೆ ನಿರ್ಧಾರ ಮಾಡಿದ್ದು ನಿಜ. ಆದರೆ ಕೆಲವು ಹಿರಿಯರ ಸಲಹೆಯ ಮೇರೆಗೆ ನಾನು ನಿರ್ಧಾರ ಬದಲಿಸಿದ್ದೇನೆ. ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಇನ್ನೂ ಕೆಲವು ದಿನ ನಾನು ಏನೂ ಹೇಳುವುದಿಲ್ಲ. ರಾಜೀನಾಮೆ ಕೊಡುವ ಹಾಗಿದ್ದರೆ ನಾನೊಬ್ಬನೇ ಕೊಡುತ್ತೇನೆ. ನಂತರ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆ ಎನ್ನುವುದು ಸುಳ್ಳು. ನಾನೇಕೆ ಕಾಂಗ್ರೆಸ್ ಸೇರಲಿ?, ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಬಿಜೆಪಿಗೆ ದ್ರೋಹ ಎಸಗುವ ಕೆಲಸ ಮಾಡುವುದಿಲ್ಲ ಎಂದರು. ಅವರು ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ತೆಗೆದುಕೊಂಡ ನಂತರ ಮಾಧ್ಯಮದವರ ಜೊತೆ ಮಾತನಾಡಿದರು.
ಯಡಿಯೂರಪ್ಪನವರು ಇನ್ನೆರಡು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆಯಲ್ಲಿ ನಾವು ಗೆದ್ದು ಬರುತ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು. ಇನ್ನು ಮಹಾರಾಷ್ಟ್ರದ ದೇವೇಂದ್ರ ಫಡ್ನವಿಸ್ ಭೇಟಿ ಬಗ್ಗೆ ಸ್ಪಷ್ಟನೆ ಕೊಟ್ಟ ಅವರು, ದೇವೇಂದ್ರ ಫಡ್ನವಿಸ್ ಅವರು ನನಗೆ ರಾಜಕೀಯ ಗಾಡ್ ಫಾದರ್. ಅವರ ಬಳಿ ನನ್ನ ಕಷ್ಟ ಹೇಳಿಕೊಂಡು ಬಂದಿದ್ದೇನೆ ಎಂದರು.