ದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಫೆನಿ ನದಿಯ ಮೇಲೆ ಕಟ್ಟಲಾಗಿರುವ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಭಾರತ ಹಾಗೂ ನೆರೆಯ ಬಾಂಗ್ಲಾದೇಶದ ನಡುವೆ ಕಟ್ಟಲಾಗಿರುವ ಈ ಸೇತುವೆಯನ್ನು ‘ಮೈತ್ರಿ ಸೇತು’ ಎಂದು ಹೆಸರಿಸಲಾಗಿದೆ.
ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಸಂಪರ್ಕ ಬಲಪಡಿಸಲು, ನೆರೆಯ ದೇಶವನ್ನು ಪ್ರೋತ್ಸಾಹಿಸಲು, ವಿಶೇಷವಾಗಿ ಭಾರತದ ಈಶಾನ್ಯ ರಾಜ್ಯಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಈ ಕಾರ್ಯಕ್ರಮ ನಿಮಿತ್ತವಾಗಿದೆ ಎಂದು ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಹೇಳಿದ್ದಾರೆ. ಸೇತುವೆಯ ಉದ್ಘಾಟನೆಯ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದ ಅವರು ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.
‘ಮೈತ್ರಿ ಸೇತು’ ಎಂಬ ಹೆಸರು ಉಭಯ ದೇಶಗಳ ಸ್ನೇಹ ಸಂಬಂಧದ ಚಿಹ್ನೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸುಮಾರು 133 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿತ್ತು ಎಂದು ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.
ಭಾರತ-ಬಾಂಗ್ಲಾದೇಶ ಸಂಪರ್ಕಿಸುವ ಮೈತ್ರಿ ಸೇತು, 1.9 ಕಿ.ಮೀ. ಉದ್ದವಿದೆ. ಸೇತುವೆ ಭಾರತದ ಸಬ್ರೂಮ್ನಿಂದ ಬಾಂಗ್ಲಾದೇಶದ ರಾಮ್ಘರ್ ಸಂಪರ್ಕಿಸಲಿದೆ. ಈ ಸೇತುವೆಯ ಮೂಲಕ, ಭಾರತ ಹಾಗೂ ಬಾಂಗ್ಲಾದೇಶ ನಡುವೆ ವ್ಯಾಪಾರ, ಜನಸಂಪರ್ಕ ಹೆಚ್ಚಲಿದೆ. ಸರಕು ಹಾಗೂ ಪ್ರಯಾಣಿಕರ ಸಂಪರ್ಕಕ್ಕೆ ಸೇತುವೆ ಸಹಕಾರಿಯಾಗಲಿದೆ. ಹೊಸ ಮಾರುಕಟ್ಟೆ ಅವಕಾಶಗಳು, ಈಶಾನ್ಯ ರಾಜ್ಯಗಳ ಉತ್ಪನ್ನಗಳಿಗೆ ಮಾರಾಟ ಅವಕಾಶ, ಸರಕು ಸಾಗಾಟವೂ ಸುಲಭ ಸಾಧ್ಯವಾಗಲಿದೆ.
ಈವರೆಗೆ ಹಿನ್ನೆಲೆಯಲ್ಲೇ ಉಳಿದಿದ್ದ ತ್ರಿಪುರಾ ರಾಜ್ಯ, ವ್ಯಾಪಾರ-ವಹಿವಾಟು ನಡೆಸುವ ಉತ್ಸಾಹದಲ್ಲಿದೆ. ರಾಜ್ಯದಲ್ಲಿ ಹೊಸ ಕೈಗಾರಿಕೆಗಳಿಗೆ ಮತ್ತು ಬಂಡವಾಳಕ್ಕೆ ಅವಕಾಶವೂ ಇದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಈ ಸೇತುವೆಯ ಉದ್ಘಾಟನೆಯ ಮೂಲಕ, ಈಶಾನ್ಯ ರಾಜ್ಯ ತ್ರಿಪುರಾ ‘ಈಶಾನ್ಯ ಭಾಗದ ಹೆಬ್ಬಾಗಿಲು’ (Gateway of North East) ಆಗಲಿದೆ. ಅಲ್ಲಿಂದ ಬಾಂಗ್ಲಾದೇಶದ ಚಿತ್ತಗಾಂವ್ ಬಂದರಿಗೆ ಕೇವಲ 80 ಕಿ.ಮೀ. ಅಂತರವಿದೆ.