✍️ರಾಜ್ ಬಿ. ಸುವರ್ಣ
ಎಸ್. ಹೌದು, ಭಗೀರಥ ಪ್ರಯತ್ನವೇ ಸರಿ, 8 ದಿನದ ಸಿದ್ಧತೆಯಲ್ಲಿ ಧರ್ಮ ನೇಮ ನಡೆಸುವುದು ಕಷ್ಟಸಾಧ್ಯವಾದ ಕಾರ್ಯ. ಅದನ್ನು ಸಾಧಿಸಿ ಸೈ ಎನಿಸಿಕೊಂಡದ್ದು ಮಾತ್ರ ಶ್ಲಾಘನೀಯ.
ನುಳಿಯಾಲು ತರವಾಡು ಮನೆ, ಯಮುನಾ ಗ್ರೂಪ್ ಹೆಸರು ಕೇಳುತ್ತಲೇ ನೆನಪಿಗೆ ಬರುವುದು ಮಂಗಳೂರಿನ ಪ್ರತಿಷ್ಠಿತ ಉದ್ಯಮಿ, ಸಜ್ಜನ ಪುರುಷೋತ್ತಮ ಶೆಟ್ಟಿ. ಉದ್ಯಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕ ಪುರುಷೋತ್ತಮ ಶೆಟ್ಟಿ ಪುತ್ತೂರಿನ ನುಳಿಯಾಲು ತರವಾಡಿನವರು. ತಮ್ಮ ಊರು ತಮ್ಮ ಜನ ಅನ್ನುವ ಅಭಿಮಾನ ಶೆಟ್ರದ್ದು. ನುಳಿಯಾಲು ತರವಾಡಿನ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ಸಂದರ್ಭದಲ್ಲೂ ತಮ್ಮ ಸೇವೆಯನ್ನು ಸಲ್ಲಿಸಿ, ಎಲೆ ಮರೆಯ ಕಾಯಿಯಂತಿದ್ದ ಶೆಟ್ರು, ತಮ್ಮ ಆರಾಧ್ಯ ದೇವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ಸ್ವಾಮಿ ಹಾಗೂ ಬೀರ್ನಾಳ್ವ ದೈವದ ಪರಮ ಭಕ್ತರು, ತಮ್ಮ ಉದ್ಯಮ ಕ್ಷೇತ್ರದ ಯಶಸ್ಸು ಭಗವಂತನ ಕೃಪೆ ಎಂದು ನಂಬುವ ಪರಮಧಾರ್ಮಿಕರು.
ನುಳಿಯಾಲು ತರವಾಡು ಮನೆ ಸುಪುಷ್ಟವಾದ ನಂತರ ಕಾಲಾದಿ ಪರ್ವಾದಿಗಳನ್ನು ನಡೆಸುತ್ತಾ, ಧರ್ಮದ ಹಾದಿಯಲ್ಲಿ ಸಾಗುವ ಹೆಬ್ಬಯಕೆ ಶೆಟ್ರ ಮನಸ್ಸಿನಲ್ಲಿತ್ತು, ಸಮುಷ್ಠಿ ಅಂದ ಮೇಲೆ ಎಲ್ಲರ ಅಭಿಪ್ರಾಯವೂ ಮಾನ್ಯ ವಲ್ಲವೇ.. ಏಕೋ ಏನೋ ಶೆಟ್ರ ಮನದಿಂಗಿತ ಮನದಲ್ಲೇ ಉಳಿಯಿತು. ತಮ್ಮ ಇಷ್ಟ ದೈವಕ್ಕೆ ಸೇವೆ ನೀಡಬೇಕು, ಆ ಚಂದವನ್ನು ಕಣ್ತುಂಬಿಸಿಕೊಳ್ಳಬೇಕು ಎಂಬ ಹಂಬಲ ಹೆಚ್ಚಾಯಿತು. ಬಹುಶಃ ಬೀರ್ನಾಳ್ವ ಹಾಗೂ ಪರಿವಾರ ಧೈವಗಳ ಚಿತ್ತವೇ ಇರಬೇಕು ಶೆಟ್ರಮನಸ್ಸಿಗೆ ಧರ್ಮ ನೇಮದ ಸತ್ಚಿಂತನೆ ಒಂದು ಸಿಟಿಲೊಡೆವುಂವತೆ ಮಾಡಿತು. ಅದರ ಪರಿಣಾಮ ನಿರ್ಮಾಣವಾದದ್ದು ಇತಿಹಾಸ.
ಸತತ ಎರಡು ಭಾರಿ ಪ್ರಯತ್ನ, ಮೂರನೇ ಬಾರಿ ಯಶಸ್ಸು ಎಸ್. ಇದು ಪುರುಷಣ್ಣನ ಧರ್ಮ ನೇಮ ನಡೆದ ಬಗೆ. ಸರ್ವ ಸನ್ನಧರಾಗಿ ಧರ್ಮನೇಮೋತ್ಸವ ನಡೆಸಬೇಕೆಂಬ ಸಿದ್ದತೆ ನಡೆಸುತ್ತಿದ್ದಾಗಲೇ ಮಹಾಮಾರಿ ಕೊರೋನಾ ವಕ್ಕರಿಸಿಕೊಂಡು ತಲ್ಲಣವನ್ನುಂಟು ಮಾಡಿ, ಧರ್ಮನೇಮ ನಿಲ್ಲಿಸಬೇಕಾಯಿತು. ಎರಡನೇ ಬಾರಿ ಮತ್ತೆ ದಿನಾಂಕ ನಿಗದಿ ಮಾಡಿ ಚಪ್ಪರ ಮುಹೂರ್ತವೂ ನಡೆದು, ಎರಡನೇ ಅಲೆ ಕೊರೋನಾ ಮಹಾ ಹೊಡೆತದಿಂದ ಮತ್ತೆ ನಿಲ್ಲುವಂತಾಯಿತು. ಇದರ ಪರಿಣಾಮ ಪುರುಷೋತ್ತಮ ಶೆಟ್ಟಿಯವರ ಸ್ವಲ್ಪಮಟ್ಟಿಗೆ ಚಿಂತಾಕ್ರಾಂತರಾದ್ರು, ಆದರೂ ದೃತಿಗೆಡನೆ ತಮ್ಮ ಅಚಲ ನಿರ್ಧಾರದ ಮೂಲಕ ಮತ್ತೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ, ಎಸ್. ಎನ್. ಪೊದ್ವಾಳರು ದಿನ ನಿಗದಿ ಮಾಡಿ, ಗೊನೆ ಮುಹೂರ್ತ ನಡೆಯಿತು. ಎಲ್ಲರಲ್ಲೂ ಮತ್ತೆ ಧರ್ಮನೇಮೋತ್ಸವದ ಸಂಭ್ರಮ, ಹೊಸ ಉತ್ಸವ, ಕೌಟುಂಬಿಕ ಭಿನ್ನಾಭಿಪ್ರಾಯ ಎಲ್ಲ ಮರೆತು ಮತ್ತೆ ಒಂದಾಗುವ ಹಂಬಲ, ಸಣ್ಣ ಪುಟ್ಟ ಮಾತುಗಳನ್ನು ಬಿಟ್ಟು ಪ್ರೀತಿ ವಾತ್ಸಲ್ಯದಿಂದ ಜೊತೆಗಿ ನುಳಿಯಾಲು ಮಣ್ಣಿನಲ್ಲಿ ಸಂಭ್ರಮಿಸುವ, ಆ ಧೈವದ ನುಡಿ ಕೇಳುವ ತಮಕ ಎಲ್ಲರಲ್ಲೂ ಮನೆಮಾಡಿತು.
ಗೊನೆ ಮುಹೂರ್ತ ನಡೆದು, ಯಜಮಾನರಾದ ಜಗನ್ನಾಥ ಶೆಟ್ಟಿಯವರ ಮುತಾಲಿಕೆಯಲ್ಲಿ ಪುರುಷೋತ್ತಮ ಶೆಟ್ಟಿಯವರು ಸೇವಾ ರೂಪವಾಗಿ ನಡೆಸುವ ಧರ್ಮನೇಮೋತ್ಸವದ ಸಿದ್ದತೆ ಪರ್ವ ಚಾಲನೆಗೊಂಡಿತು. ಕೇವಲ 8 ದಿನ ನಡೆಯಬೇಕಾದ್ದು, ಬಹಳಷ್ಟು, ಎಲ್ಲವೂ ಧೈವಗಳ ಚಿತ್ತಕ್ಕೆ ಬಿಟ್ಟು, ದೈವಗಳ ಮೇಲೆ ಭಾರಹಾಕಿ ಕೆಲಸ ಆರಂಭಗೊಂಡಿತು. ಕುಟುಂಬಿಕರ ಸಹಕಾರ, ಸ್ನೇಹಿತ ಬೆಂಬಲ ಶೆಟ್ರ ಕೈಹಿಡಿಯಿತು. ಎಲ್ಲೆಲ್ಲೂ ಸ್ವಾಗತ ಕಮಾನು, ದ್ವಾರ, ಪ್ಲೇಕ್ಸ್ ಗಳ ಅಬ್ಬರ, ಸ್ವಾಗತ ಕೋರುವ ಕೇಸರಿ ಬಂಟಿಂಗ್ಸ್ ಗಳು.. ಸುಂದರವಾದ ಚಪ್ಪರ ಅದಕ್ಕೆ ಮರೆಗು ನೀಡುತ್ತಿದ್ದ, ಆಳ್ವಾಸ್ ನ ಗೂಡುದೀಪಗಳು, ವಿದ್ಯುತ್ ಅಲಂಕಾರ, ಬಣ್ಣ ಬಣ್ಣದ ಲೈಟುಗಳು, ಸಾಂಪ್ರದಾಯಿಕ ಶೈಲಿಯ ಅಲಂಕಾರ… ವಾವ್..! ಒಟ್ಟಿನಲ್ಲಿ ಸ್ವರ್ಗವೇ ಧರೆಗಿಸಿದ ಸಂಭ್ರಮ.
ಡಿಸೆಂಬರ್ 26 ರ ಮುಂಜಾವು ನುಳಿಯಾಲಿನ ಪುಣ್ಯದ ಮಣ್ಣಿಗೆ ಧಾರ್ಮಿಕರನ್ನು ಕೈಬೀಸಿ ಕರೆಯುತ್ತಿತ್ತು. ಕುಂಟಾರು ತಂತ್ರಿಗಳ ನೇತೃತ್ವದಲ್ಲಿ ಗಣ ಹೋಮದಾಗಿ ಧಾರ್ಮಿಕ, ವೈದಿಕ ಕಾರ್ಯಕ್ರಮ, ಕಣಿತ ಭಜನೆ, ಹರಿಸೇವೆ ಸಂಭ್ರಮವೋ ಸಂಭ್ರಮ. ಮಧ್ಯಾಹ್ನದ ಅನ್ನದಾನ ನಂತರ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಯವರ ನೇತೃತ್ವದಲ್ಲಿ ಯಕ್ಷ ಗಾನ ನಾಟ್ಯ ವೈಭವದ ಸೊಬಗು ನುಳಿಯಾಲಿನ ಪರಿಸರ ಕಲಾ ಲೋಕದಲ್ಲಿ ಪವಡಿಸುವಂತೆ ಮಾಡಿತ್ತು, ಪಟ್ಲ, ಪುಣ್ಚಿತ್ತಾಯ, ಮಯ್ಯರ ಪದ್ಯ, ಕು.ದಿಶಾ ಶೆಟ್ಟಿ, ಡಾ.ವರ್ಷ ಅಪುಲ್ ಆಳ್ವಾ, ಅಶ್ವಿನಿ ಕೊಂಡದಕುಳಿ, ಕು.ಕೃಪಾ ಇರಾ ರ ನಾಟ್ಯ ಮನಸೋಲುವಂತೆ ಮಾಡಿತ್ತು. ಅತ್ತ ಪೂಜ್ಯ ಒಡಿಯೂರು ಶ್ರೀಗಳ ಪಾದ ಸ್ಪರ್ಶ ನುಳಿಯಾಲಿನ ಮಣ್ಣಿಗೆ ಗೋಧೂಳಿ ಮುಹೂರ್ತದಲ್ಲಿ.. ಪೂಜ್ಯ ಆಶೀರ್ವಾದ ಮಾತುಗಳಿಗೆ ಕಿವಿಯಾಗುವ ಸೌಭಾಗ್ಯ ನುಳಿಯಾಲಿನ ಸಮಸ್ತರಿಗೆ..
ಧರ್ಮ ಚಾವಡಿಯಿಂದ ಬಂಡಾರ ಇಳಿದು ಸರ್ವಾಲಂಕೃತ ಕೊಡಿಯಡಿಯಲ್ಲಿ ಧೈವದ ಬಂಡಾರ ಇಟ್ಟು.. ಎಣ್ಣೆ ಬೂಳ್ಯ ನೀಡಿ ಧರ್ಮ ನಡಾವಳಿಗೆ ಸರ್ವ ಸನ್ನಧವಾಯಿತು.
ರಾತ್ರಿಯಾಗುತ್ತಲೆ ಸಿಡಿಮದ್ದಿನ ಸದ್ದು, ಟಾಸೆ, ಬ್ಯಾಂಡಿನ ಸದ್ದಿನೊಂದಿಗೆ ರಾಜನ್ ದೈವ ಪಿಲಿಭೂತಕ್ಕೆ ನೇಮ, ಜುಮಾದಿ, ಕಲ್ಲುರ್ಟಿ, ಪಂಜುರ್ಲಿ ಮೂಕಾಂಬಿಕಾ ಗುಳಿಗ,
ವರ್ಣಾರ ಪಂಜುರ್ಲಿ ದೈವಗಳಿಗೆ ನೇಮ ನಿರಂತರವಾಗಿ ನಡೆಯುತ್ತಿತು.
ಮಂಗಳೂರಿನ ಪೋಲೀಸ್ ಕಮಿಷನರ್, ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ಮಾಜಿ ಸಚಿವ ನಾಗರಾಜ ಶೆಟ್ಟಿ , ಶರಣ್ ಪಂಪ್ವೆಲ್, ಮುರಳಿಕೃಷ್ಣ ಹಸಂತ್ತಡ್ಕ ಸೇರಿದಂತೆ ಗಣ್ಯರದಂಡು ನುಳಿಯಾಲಿನತ್ತ ಮುಖಮಾಡಿತ್ತು.
ಪೂಜ್ಯ ವಜ್ರದೇಹಿ ಶ್ರೀಗಳು ತಡರಾತ್ರಿ ಚಿತ್ತಯಿಸಿ ಆಶೀರ್ವಾದಿಸಿದ್ರು, ಉಷಃ ಕಾಲದಲ್ಲಿ ರಕ್ತೇಶ್ವರಿ ದೈವದ ನೇಮ ನಡೆದು, ಬೆಳಗ್ಗೆ ಧರ್ಮದೈವ ಬೀರ್ಣಾಳ್ವ ದೈವಕ್ಕೆ ನೇಮ ಹಾಗೂ ಗುಳಿಗ ದೈವದ ನೇಮ ನಡೆಯಿತು.
ಮಾಜಿ ಸಚಿವ ರಮಾನಾಥ ರೈ ಬೆಳ್ಳಿಪಾಡಿಗುತ್ತು, ಶಾಸಕ ಯು.ಟಿ. ಕಾದರ್, ವಿಧಾನ ಪರಿಷತ್ ಶಾಸಕ ಮಂಜುನಾಥ ಬಂಢಾರಿ, ಮೇಯರ್ ಪ್ರೇಮಾನಾಥ್, ಅಚುತ್ತ ಮೂಡಿತ್ತಾಯ, ಬಾಸ್ಕರ ಆಚಾರ್ಯ ಹಿಂದಾರು, ಭಾಸ್ಕರ ಮೊಯ್ಲಿ, ಶಶಿಧರ ಹೆಗ್ಡೆ, ಜಗದೀಶ್ ಶೇಣವ ಸೇರಿದಂತೆ ನೂರಾರು ಗಣ್ಯರು ಪಾಲು ಪಡೆದರು.
ಅದ್ದೂರಿಯಾಗಿ ನಿರಂತ 2 ದಿನಗಳಕಾಲ ನಡೆದ ಧರ್ಮನೇಮೋತ್ಸವಕ್ಕೆ ತೆರೆಬಿತ್ತು. ನಿರಂತರ ಊಟೋಪಾಚರ, ಉಚ್ಚಕಟ್ಟಾದ ವ್ಯವಸ್ಥೆ, ಬಂದ ಅತಿಥಿಗಳಿಗೆ ಶಾಲಿನ ಗೌರವ ಹೀಗೆ ಒಟ್ಟಿನಲ್ಲಿ ಸುಂದರ ಕಾರ್ಯಕ್ರಮಕ್ಕೆ ನುಳಿಯಾಲಿನ ಮಣ್ಣ ಸಾಕ್ಷಿಯಾಗಿತು.
ದೂರದ ಊರುಗಳಲ್ಲೂ ಸಾವಿರಾರು ಮಂದಿ ಕಹಳೆ ನ್ಯೂಸ್ ಹಾಗೂ ವಿಟಿವಿ ಮೂಲಕ ನೇರಪ್ರಸಾರದಲ್ಲಿ ಧರ್ಮ ನಡಾವಳಿಗಳಿ ವೀಕ್ಷಿಸಿದರೆ, ಪತ್ರಿಕೆಗಳು ಪುಟಗಟ್ಟಲೆ ವರದಿ ಪ್ರಕಟಿಸಿದವು. ಒಟ್ಟಿನಲ್ಲಿ ಪುರುಷೋತ್ತಮ ಶೆಟ್ಟಿಯವರ ಭಗೀರಥ ಪ್ರಯತ್ನ ಯಶಸ್ವಿಯಾಗಿ ಅಚ್ಚುಕಟ್ಟಾಗಿ ನಡೆಯಿತು.